ಮಾಲೂರು: ತಾಲ್ಲೂಕು ಗಡಿ ಭಾಗದ ಮಾಸ್ತಿ ಹೋಬಳಿಯ ದಿನ್ನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಾಲ್ಕೈದು ದಿನಗಳಿಂದ ಬೀಡು ಬಿಟ್ಟಿರುವ ಐದು ಆನೆಗಳು ಕಬ್ಬು ಟೊಮೆಟೊ ಸೇರಿದಂತೆ ಹಲವು ಬೆಳೆಗಳನ್ನು ನಾಶ ಪಡಿಸಿದ್ದು, ರೈತರು ಆತಂಕಗೊಂಡಿದ್ದಾರೆ.
ಭಾನುವಾರ ಬೆಳಿಗ್ಗೆಯಿಂದ ತಾಲ್ಲೂಕಿನ ಚಿಕ್ಕದಾನವಹಳ್ಳಿ ಸಮೀಪದ ತೋರಲಕ್ಕಿ ರಸ್ತೆ ಪಕ್ಕದಲ್ಲೇ ಬೀಡು ಬಿಟ್ಟಿವೆ. ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆನೆಗಳನ್ನು ಕಾಡಿಗಟ್ಟಲು ಹರಸಹಾಸ ಪಡುತ್ತಿದ್ದಾರೆ.
ಜನರ ಗದ್ದಲ, ಶಿಳ್ಳೆ ಮತ್ತು ಕಿರುಚಾಟದಿಂದ ಆನೆಗಳು ಯಾವ ಕಡೆಯು ಸಂಚರಿಸಲಾಗದೆ ಸಂಜೆ 4 ರವರೆಗೆ ಅಲ್ಲೆ ಉಳಿದಿದ್ದವು. ಅಧಿಕಾರಿಗಳಿಗೆ ಜನರನ್ನು ನಿಯಂತ್ರಿಸುವುದೇ ದೊಡ್ಡ ಸಮಸ್ಯೆಯಾಗಿತ್ತು. ಜನರನ್ನು ನಿಯಂತ್ರಿಸಲು ಮಾಸ್ತಿ ಠಾಣೆಯ ಪೊಲೀಸರು ಸಾಥ್ ನೀಡಿದರು.
ಕಬ್ಬಿನ ಬೆಳೆ ನಾಶ: ಭಾನುವಾರ ರಾತ್ರಿ ಮುನಿಕೃಷ್ಣಪ್ಪ ಅವರಿಗೆ ಸೇರಿದ ಒಂದು ಎಕರೆ ಭೂಮಿಯಲ್ಲಿ ಬೆಳೆದಿದ್ದ ಕಬ್ಬು ಬೆಳೆಯನ್ನು ನಾಶ ಮಾಡಿವೆ. ಕಾಡಾನೆಗಳ ದಾಳಿಯಿಂದ ನಷ್ಟಕ್ಕೆ ಒಳಗಾದ ರೈತರಿಗೆ ಸರ್ಕಾರ ನಷ್ಟ ಪರಿಹಾರ ನೀಡಬೇಕಾಗಿದೆ ಎಂದು ರೈತರು ಅಗ್ರಹಿಸಿದ್ದಾರೆ. ಕಾಡಾನೆಗಳು ಆಗಿಂದಾಗ್ಗೆ ದಾಳಿ ನಡೆಸುತ್ತಿದ್ದು, ಅರಣ್ಯ ಇಲಾಖೆ ಎಚ್ಚರಿಕೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ. ಐದು ಕಾಡಾನೆಗಳು ಭಾನುವಾರ ಮಾರ್ಕಂಡಯ್ಯ ಕೆರೆ ಮಾರ್ಗವಾಗಿ ಗೊಡಗಹಳ್ಳಿ ,ಗುಂಡ್ಲಪಾಳ್ಯ ಸಮೀಪವಿರುವ ಗುಡ್ಡುಗಾಡು ಪ್ರದೇಶದಲ್ಲಿ ಬೀಡು ಬಿಟ್ಟಿದ್ದವು. ರಾತ್ರಿ ವೇಳೆಗೆ ಕಾರ್ಯಚರಣೆ ನಡೆಸಿ ತಮಿಳು ನಾಡು ಅರಣ್ಯ ಪ್ರದೇಶಕ್ಕೆ ಓಡಿಸಲಾಯಿತು. ಆದರೆ, ಸೋಮವಾರ ಬೆಳಿಗ್ಗೆ ಮತ್ತೆ ಗಡಿ ಭಾಗವಾದ ಗುಂಡ್ಲಪಾಳ್ಯ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
* ಐದು ಕಾಡಾನೆಗಳು ಭಾನುವಾರ ಮಾರ್ಕಂಡಯ್ಯ ಕೆರೆ ಮಾರ್ಗವಾಗಿ ಗೊಡಗಹಳ್ಳಿ ,ಗುಂಡ್ಲಪಾಳ್ಯ ಸಮೀಪವಿರುವ ಗುಡ್ಡುಗಾಡು ಪ್ರದೇಶದಲ್ಲಿ ಬೀಡು ಬಿಟ್ಟಿದ್ದವು. ರಾತ್ರಿ ವೇಳೆಗೆ ಕಾರ್ಯಚರಣೆ ನಡೆಸಿ ತಮಿಳು ನಾಡು ಅರಣ್ಯ ಪ್ರದೇಶಕ್ಕೆ ಹೋಡಿಸಲಾಯಿತು. ಆದರೆ ಸೋಮವಾರ ಬೆಳಿಗ್ಗೆ ಮತ್ತೆ ಗಡಿ ಭಾಗವಾದ ಗುಂಡ್ಲಪಾಳ್ಯ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿವೆ.
-ರಾಜು, ಪರಿವೀಕ್ಷಕ, ಅರಣ್ಯ ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.