ಬೆಂಗಳೂರು: ‘ಶಾಸಕ ಡಿ.ಕೆ.ಶಿವಕುಮಾರ್ ಪ್ರಕರಣದಲ್ಲಿ ನನ್ನನ್ನೂ ಸೇರಿದಂತೆ 184 ಜನರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್ ನೀಡಿದೆ’ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬುಧವಾರ ಹೇಳಿದರು.
‘ದೆಹಲಿ ಇ.ಡಿ ಕಚೇರಿಯಲ್ಲಿ ಗುರುವಾರ ವಿಚಾರಣೆಗೆ ಹಾಜರಾಗುತ್ತಿದ್ದೇನೆ. ವಿಚಾರಣೆಗೆ ಬರುವಂತೆ ಒಂದು ಸಾಲಿನ ಪತ್ರ ಬಂದಿದೆ. ನನ್ನ ಹಾಗೂ ಶಿವಕುಮಾರ್ ನಡುವೆ ಹಣಕಾಸಿಗೆ ಸಂಬಂಧಿಸಿದಂತೆ ಯಾವುದೇ ವ್ಯವಹಾರ ನಡೆದಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ಸೆ. 14ರಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಹೋಗಲು ಸಾಧ್ಯವಾಗಿಲ್ಲ. ಗುರುವಾರ ಬರುವುದಾಗಿ ತಿಳಿಸಿದ್ದೇನೆ. ಈ ಮೊದಲು ಬೆಂಗಳೂರಿನಲ್ಲೇ ವಿಚಾರಣೆಗೆ ಬರುವುದಾಗಿ ಕೇಳಿಕೊಂಡಿದ್ದೆ. ಅದಕ್ಕೆ ಇ.ಡಿ ಅಧಿಕಾರಿಗಳಿಂದ ಉತ್ತರ ಬಂದಿಲ್ಲ’ ಎಂದು ಸ್ಪಷ್ಟಪಡಿಸಿದರು.