ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ಭೀತಿಯಿಂದ ಲಾಕ್ಡೌನ್ ಜಾರಿಯಲ್ಲಿದ್ದರೂ ಬೇಕರಿ, ಬಿಸ್ಕೆಟ್, ಕಾಂಡಿಮೆಂಟ್ಸ್ ಉತ್ಪನ್ನಗಳ ತಯಾರಿ, ಸಾಗಣೆ ಮತ್ತು ಸಗಟು ಮಾರಾಟಕ್ಕೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಗತ್ಯ ವಸ್ತುಗಳ ಪೂರೈಕೆ ಮತ್ತು ಸಾಗಣೆ ಜಾಲದ ನೋಡಲ್ ಅಧಿಕಾರಿ ರಾಜೇಂದ್ರ ಕಟಾರಿಯಾ ಪತ್ರ ಬರೆದಿದ್ದಾರೆ.
‘ಇಂಥ ಘಟಕಗಳು ಉದ್ಯೋಗಿಗಳ ಆರೋಗ್ಯ, ಶುಚಿತ್ವ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕು. ವಸ್ತುಗಳನ್ನು ಪಾರ್ಸೆಲ್ ನೀಡಲು ಮಾತ್ರ ಅವಕಾಶ’ ಎಂದೂ ಅವರು ಸ್ಪಷ್ಪಡಿಸಿದ್ದಾರೆ.
ಬೇಕರಿ ವಸ್ತುಗಳು ಅಗತ್ಯ ವಸ್ತುಗಳ ವ್ಯಾಪ್ತಿಯಲ್ಲಿದ್ದು, ರೋಗಿಗಳು, ಹಿರಿಯರು, ಮಕ್ಕಳು ಮತ್ತು ಸಾರ್ವಜನಿಕರಿಗೆ ಅಗತ್ಯವಾಗಿದೆ. ಆದರೆ, ಲಾಕ್ಡೌನ್ ಘೋಷಿಸಿದ ಬಳಿಕ ಈ ವಸ್ತುಗಳನ್ನು ಉತ್ಪಾದಿಸುವ ಘಟಕಗಳು ಸ್ಥಗಿತಗೊಂಡಿದ್ದವು.