ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿಗಳ ಅವಧಿ ವಿಸ್ತರಿಸಿ: ಸರ್ಕಾರಕ್ಕೆ ಸಿದ್ದರಾಮಯ್ಯ ಪತ್ರ

Last Updated 16 ಮೇ 2020, 11:59 IST
ಅಕ್ಷರ ಗಾತ್ರ

ಬೆಂಗಳೂರು: ‘ಗ್ರಾಮ ಪಂಚಾಯಿತಿಗಳಿಗೆ ಯಾವುದೇ ಕಾರಣಕ್ಕೂ ಹೊಸ ಆಡಳಿತ ಸಮಿತಿ ರಚಿಸುವ ಅಥವಾ ಆಡಳಿತಾಧಿಕಾರಿ ನೇಮಿಸುವ ಕೆಟ್ಟ ಸಂಪ್ರದಾಯಕ್ಕೆ ಸರ್ಕಾರ ನಾಂದಿ ಹಾಡಬಾರದು. ಅದರ ಬದಲು, ಪ್ರಸ್ತುತ ಅಧಿಕಾರದಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿಗಳನ್ನು ಮತ್ತು ಸದಸ್ಯರನ್ನು ಚುನಾವಣೆ ನಡೆಸುವವರೆಗೆ ಮುಂದುವರೆಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

‘ಕೊರೊನಾ ಬಿಕ್ಕಟ್ಟಿನ ನೆಪದಲ್ಲಿ ಚುನಾವಣೆ ನಡೆಸದೆ ಜಿಲ್ಲಾಧಿಕಾರಿಗಳ ಮೂಲಕ ಆಡಳಿತಾಧಿಕಾರಿಗಳನ್ನು ಮತ್ತು ನಾಮನಿರ್ದೇಶಿತ ಆಡಳಿತ ಸಮಿತಿ ರಚಿಸಲು ಸರ್ಕಾರ ಮುಂದಾದರೆ, ಅದು ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಆಶಯಗಳಿಗೆ ಸಂಪೂರ್ಣ ವಿರುದ್ಧವಾಗುತ್ತದೆ. ಒಂದು ವೇಳೆ ತಾತ್ಕಾಲಿಕ ವ್ಯವಸ್ಥೆ ಮಾಡಲೇಬೇಕೆಂದಿದ್ದರೆ 1987ರಲ್ಲಿ ಮಾಡಿದಂತೆ ಅವಧಿ ವಿಸ್ತರಿಸಬೇಕು. ಆ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.

‘ಗ್ರಾಮ ಪಂಚಾಯತಿಗಳ ಕಾರ್ಯ ವೈಖರಿಯ ಬಗ್ಗೆ ಏನೇನೂ ತಿಳಿವಳಿಕೆ ಇಲ್ಲದವರನ್ನು, ನಿರ್ದಿಷ್ಠ ಸಿದ್ಧಾಂತಗಳ ಹಿನ್ನೆಲೆ ಇರುವವರನ್ನು ಸೇರಿಸಿ ಆಡಳಿತ ಸಮಿತಿ ರಚಿಸಿದರೆ ಕೊರೊನಾದಂಥ ಭೀಕರ ಬಿಕ್ಕಟ್ಟನ್ನು ನಿಭಾಯಿಸಲು ಕಷ್ಟವಾಗುತ್ತದೆ. ಇದರಿಂದ ಗ್ರಾಮೀಣ ಕರ್ನಾಟಕ ತೀವ್ರ ಅನ್ಯಾಯಕ್ಕೆ ತುತ್ತಾಗುತ್ತದೆ’ ಎಂದೂ ಸಿದ್ದರಾಮಯ್ಯ ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಗ್ರಾಮ ಸ್ವರಾಜ್ಯದ ಸ್ಥಾಪನೆಯ ಮೂಲಕ ಭಾರತದ ಗ್ರಾಮಗಳನ್ನು ಸರ್ವತೋಮುಖವಾಗಿ ಅಭಿವೃದ್ಧಿ ಮಾಡಲು ಸಾಧ್ಯ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನಂಬಿದ್ದರು. ಈ ಹಿನ್ನೆಲೆಯಲ್ಲಿ 1991ರಲ್ಲಿ ರಾಜೀವ್‍ಗಾಂಧಿ ಮತ್ತು ಪಿ.ವಿ ನರಸಿಂಹರಾವ್ ಅವರ ಪ್ರಯತ್ನಗಳಿಂದ ಸಂವಿಧಾನಕ್ಕೆ 73ನೇ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿಯ ಮೂಲಕ ಸಂವಿಧಾನದ ಅನುಚ್ಛೇದ 243ಕ್ಕೆ ತಿದ್ದುಪಡಿ ತಂದು ಗ್ರಾಮ ಪಂಚಾಯತಿಗಳನ್ನು ಸ್ಥಳೀಯ ಸರ್ಕಾರಗಳನ್ನಾಗಿ ರೂಪಿಸಲಾಯಿತು’.

‘ಗ್ರಾಮ ಪಂಚಾಯತಿಗಳಿಗೆ ಆಯ್ಕೆಯಾಗುವ ಸದಸ್ಯರು ಯಾವುದೇ ಪಕ್ಷ, ಬಣ ಮುಂತಾದವುಗಳಿಗೆ ಸೇರದೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಸಂವಿಧಾನದ ಮೂಲ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ– 1993 ನ್ನು ಜಾರಿಗೆ ತರಲಾಯಿತು. 5 ವರ್ಷಗಳ ಹಿಂದೆ ರಾಜ್ಯದ 6,024 ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣೆಗಳಲ್ಲಿ 97,060 ಸದಸ್ಯರು ಆಯ್ಕೆಯಾದರು. ಬರ, ಪ್ರವಾಹ ಕಠಿಣ ಪರಿಸ್ಥಿತಿಯನ್ನು ಹಾಗೂ ಗ್ರಾಮೀಣ ಅಭಿವೃದ್ಧಿಯನ್ನು ಸುಸೂತ್ರವಾಗಿ ನಿಭಾಯಿಸುವುದರ ಮೂಲಕ ಉತ್ತಮವಾಗಿ ಕೆಲಸ ಮಾಡಿದ್ದಾರೆ’.

‘ಎಲ್ಲ ಗ್ರಾಮ ಪಂಚಾಯತಿನವರು ಕೋವಿದ್ 19ರ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಈ ವೈರಸ್ಸಿನ ಸೋಂಕು ತೀವ್ರವಾಗಿ ಹರಡುತ್ತಿಲ್ಲ. ನಗರಗಳಿಂದ ವ್ಯಾಪಕವಾಗಿ ಜನರು ಹಳ್ಳಿಗಳಿಗೆ ವಲಸೆ ಹೋದರೂ ಈ ಬೇಸಿಗೆಯಲ್ಲಿ ಕುಡಿಯುವ ನೀರು, ನೈರ್ಮಲ್ಯ ಮುಂತಾದ ಸಮಸ್ಯೆಗಳು ಸೃಷ್ಟಿಯಾಗದಂತೆ ಗ್ರಾಮ ಪಂಚಾಯಿತಿಗಳು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿವೆ. ಈ ಸದಸ್ಯರುಗಳ ಅಧಿಕಾರ ಅವಧಿ ಮುಂದಿನ ಒಂದೆರಡು ತಿಂಗಳಲ್ಲಿ ಮುಗಿಯುತ್ತದೆ. ಸಂವಿಧಾನದ ಅನುಚ್ಛೇದ 243 ರ ಪ್ರಕಾರ ಚುನಾವಣೆಗಳನ್ನು ನಿಗದಿತ ಅವಧಿಯೊಳಗೆ ಕಡ್ಡಾಯವಾಗಿ ನಡೆಸಬೇಕಾಗಿದೆ. ಆದರೆ, ಕೊರೊನಾ ಸೋಂಕಿನ ಹೆಸರು ಹೇಳಿಕೊಂಡು ಸರ್ಕಾರ ಚುನಾವಣೆಗಳನ್ನು ಮುಂದೂಡಲು ಪ್ರಯತ್ನಿಸುತ್ತಿದೆ. ಹೀಗೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಹಿಂದೆ ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಸಹ ನಿಗದಿಪಡಿಸಿದ ಅವಧಿಯ ಒಳಗೆ ಚುನಾವಣೆ ನಡೆಸುವಂತೆ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡಿವೆ’ ಎಂದೂ ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಮಾತೃಶ್ರೀ, ಸಾಂತ್ವನ ಯೋಜನೆ ಮುಂದುರಿಸಿ’:

‘ರಾಜ್ಯ ಸರ್ಕಾರಕ್ಕೆ ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಕೂಡಲೆ ಸಾಂತ್ವನ ಮತ್ತು ಮಾತೃಶ್ರೀ ಯೋಜನೆಗಳ ರದ್ಧತಿ ಹಿಂಪಡೆದು ಯಥಾಸ್ಥಿತಿಯಲ್ಲಿ ಮುಂದುವರೆಸಬೇಕು’ ಎಂದೂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

‘ಈ ಯೋಜನೆಗಳು ಸಮಾಜಮುಖಿ ಕಾರ್ಯಕ್ರಮಗಳಾಗಿದ್ದು, ಏಕಾಏಕಿ ರಾಜ್ಯ ಸರ್ಕಾರ ರದ್ದುಗೊಳಿಸಿರುವುದು ಮಹಿಳಾ ಸಮೂಹಕ್ಕೆ ಮಾಡಿರುವ ದೊಡ್ಡ ದ್ರೋಹ ಮತ್ತು ಅನ್ಯಾಯ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ

ಮುಖ್ಯಮಂತ್ರಿಗೆ ಮತ್ತೊಂದು ಪತ್ರ ಬರೆದಿರುವ ಸಿದ್ದರಾಮಯ್ಯ, ‘ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ 50 ರಷ್ಟು ಮಹಿಳಾ ಸಮೂಹ ಇದೆ. ಮಹಿಳೆಯರ ಪ್ರಮುಖ ಸಮಸ್ಯೆಗಳಾದ ವರದಕ್ಷಿಣೆ ಕಿರುಕುಳ, ಲೈಂಗಿಕ ಹಲ್ಲೆ, ಕೌಟುಂಬಿಕ ಹಿಂಸೆ ಹಾಗೂ ಇತರೆ ದೌರ್ಜನ್ಯಗಳಿಗೆ ಒಳಪಟ್ಟ ಮಹಿಳೆಯರ ಸಮಸ್ಯೆಗಳಿಗೆ ಒಂದೆ ಸೂರಿನಡಿಯಲ್ಲಿ ಸ್ಪಂದಿಸಿ, ಅವರಿಗೆ ವೈದ್ಯಕೀಯ, ಕಾನೂನು, ಸಲಹೆ ಹಾಗೂ ಸಾಂತ್ವನವನ್ನು ನೀಡುವುದರ ಮೂಲಕ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ 2001-02ನೇ ಸಾಲಿನಿಂದ ‘ಸಾಂತ್ವನ‘ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿತ್ತು.

‘ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ 193 ಸಾಂತ್ವನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಕೇಂದ್ರದಲ್ಲೂ ಒಬ್ಬ ಸಮಾಲೋಚಕರು, ವಕೀಲರು ಸೇರಿದಂತೆ ನಾಲ್ವರು ಸರ್ಕಾರ ನೀಡುವ ಗೌರವಧನದ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಏಕಾಏಕಿ ಮೇ 12 ರಂದು ರಾಜ್ಯ ಸರ್ಕಾರ ಕೊರೊನಾ ರೋಗದ ನೆಪ ಒಡ್ಡಿ, ಸಂಪನ್ಮೂಲಗಳ ಉಳಿತಾಯದ ನೆಪದಲ್ಲಿ ಎಲ್ಲ ಸಾಂತ್ವನ ಕೇಂದ್ರಗಳನ್ನು ರದ್ದುಪಡಿಸುವ ಆದೇಶ ಹೊರಡಿಸಿದೆ’ ಎಂದೂ ಸಿದ್ದರಾಮಯ್ಯ ದೂರಿದ್ದಾರೆ.

‘ಗರ್ಭಿಣಿ ಮತ್ತು ಬಾಣಂತಿಯರ ಪೌಷ್ಟಿಕತೆ ಮತ್ತು ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ತಲಾ ₹ 5,000 ಸಹಾಯಧನ ನೀಡುವ ‘ಮಾತೃಶ್ರೀ’ ಯೋಜನೆಯನ್ನು 2018ರಲ್ಲಿ ರಾಜ್ಯದಲ್ಲಿ ಜಾರಿಗೊಳಿಸಲಾಗಿತ್ತು. ಈ ಯೋಜನೆಯಿಂದ ಅನೇಕ ಗರ್ಭಿಣಿ ಮತ್ತು ಬಾಣಂತಿಯರಿಗೆ ಉಪಯೋಗವಾಗಿ ಹೆರಿಗೆ ಸಂದರ್ಭದ ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ’ ಎಂದೂ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT