ಬೆಂಗಳೂರು: ಧಾರವಾಡದಲ್ಲಿ ಜನವರಿ 4 ರಿಂದ 6 ರವರೆಗೆ ನಡೆಯುವ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಉತ್ತರ ಕರ್ನಾಟಕದ ಅಭಿವೃದ್ಧಿ ಸವಾಲುಗಳು’, ‘ದಲಿತ ಅಸ್ಮಿತೆ’, ‘ಕನ್ನಡ ಶಾಲೆಗಳ ಅಳಿವು– ಉಳಿವು’ ವಿಷಯಗಳ ಕುರಿತು ಗೋಷ್ಠಿಗಳನ್ನು ಏರ್ಪಡಿಸಲಾಗಿದೆ.
ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರಗೋಷ್ಠಿಯಲ್ಲಿ ನಂಜುಂಡಪ್ಪ ವರದಿ ಅನುಷ್ಠಾನ ಮತ್ತು ಸವಾಲುಗಳು, ಬರಗಾಲ– ವಲಸೆ, ಸಾಂಸ್ಕೃತಿಕ ಪ್ರಾಮುಖ್ಯತೆ ವಿಷಯ ಚರ್ಚೆಯಾಗಲಿವೆ. ದಲಿತ ಅಸ್ಮಿತೆ ಕುರಿತ ವಿಚಾರಗೋಷ್ಠಿ ಅಧ್ಯಕ್ಷತೆಯನ್ನು ಕೆ.ಬಿ.ಶಾಣಪ್ಪ ವಹಿಸಲಿದ್ದಾರೆ. ದಲಿತ ಚಳವಳಿ ಬಿಕ್ಕಟ್ಟುಗಳು, ದಲಿತತ್ವ ಸ್ಥಿತ್ಯಂತರ, ದಲಿತ ವಾಙ್ಮಯ, ಹೊಸ ನೆಲೆಗಳು ಸಂಶೋಧನೆ ಕುರಿತ ವಿಚಾರ ಮಂಡನೆಯಾಗಲಿವೆ. ಕನ್ನಡ ಶಾಲೆಗಳು ಅಳಿವು– ಉಳಿವು ಗೋಷ್ಠಿಯ ಅಧ್ಯಕ್ಷತೆ ಜಿ.ಎಸ್.ಜಯದೇವ ವಹಿಸುವರು. ಸರ್ಕಾರಿ ಶಾಲೆಗಳು ಮತ್ತು ಆರ್ಟಿಐ ಪ್ರಲೋಭನೆ, ಕನ್ನಡ ಮಾಧ್ಯಮ ಎದುರಿಸುತ್ತಿರುವ ಬಿಕ್ಕಟ್ಟುಗಳು ಹಾಗೂ ಗುಣಮಟ್ಟ ಶಿಕ್ಷಣ ಕುರಿತು ಚರ್ಚೆಯಾಗಲಿದೆ.
ಡಾ. ಚಂದ್ರಶೇಖರ ಕಂಬಾರ ಅವರ ಸಾಹಿತ್ಯ ಕುರಿತು ಸಿ.ಎನ್.ರಾಮಚಂದ್ರನ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಮಹಿಳಾ ಸಂವೇದನೆ ಕುರಿತ ಗೋಷ್ಠಿಯ ಅಧ್ಯಕ್ಷತೆಯನ್ನು ವೀಣಾ ಶಾಂತೇಶ್ವರ ಅವರು ವಹಿಸಲಿದ್ದಾರೆ. ರಾಜಕಾರಣ ಮತ್ತು ಮಹಿಳಾ ಸಂವೇದನೆ, ಮಹಿಳಾ ಆತ್ಮಕಥನ ವಿಷಯದ ಕುರಿತು ಕವಿತಾ ರೈ, ರೂಪಾ ಡಿ, ಶಶಿಕಲಾ ವಸ್ತ್ರದ ಮಾತನಾಡುವರು.
ಗಡಿನಾಡ ತಲ್ಲಣಗಳು ಕುರಿತ ಗೋಷ್ಠಿಯ ಅಧ್ಯಕ್ಷತೆಯನ್ನು ರಾಘವೇಂದ್ರ ಜೋಷಿ ವಹಿಸಲಿದ್ದಾರೆ. ಗಡಿ ನಾಡ ಸಮಸ್ಯೆ; ಎದುರಿಸಬೇಕಾದ ಪ್ರಶ್ನೆಗಳು, ಹೊರನಾಡ ಕನ್ನಡಿಗರ ಸಮಸ್ಯೆಗಳು, ಗಡಿನಾಡ ಕೊಡುಕೊಳ್ಳುವಿಕೆ ವಿಷಯಗಳ ಕುರಿತು ಅಶೋಕ್ ಚಂದರಗಿ, ಶ್ರೀನಿವಾಸ ಜೋಕಟ್ಟೆ, ಚಂದ್ರಕಾಂತ ಪೋಕಳೆ ಮಾತನಾಡಲಿದ್ದಾರೆ.
ನೀರಾವರಿ ಸಮಸ್ಯೆಗಳ ಗೋಷ್ಠಿ ಅಧ್ಯಕ್ಷತೆಯನ್ನು ಸುಪ್ರೀಂ ಕೋರ್ಟ್ ವಕೀಲ ಮೋಹನ ಕಾತರಕಿ ವಹಿಸುವರು. ಮಹದಾಯಿ ಯೋಜನೆಗಳು ಮತ್ತು ಜಲ ಮೂಲಗಳು ಹಾಗೂ ಜಲಾಶಯಗಳ ಸದ್ಬಳಕೆ ವಿಷಯಗಳ ಕುರಿತು ವಿಜಯ ಕುಲಕರ್ಣಿ ಮತ್ತು ಎಸ್.ಎಫ್.ಪಾಟೀಲ ವಿಷಯ ಮಂಡಿಸುವರು.
ಸಮಾನಾಂತರ ವೇದಿಕೆಯಲ್ಲಿ ಕನ್ನಡ ಕಟ್ಟುವಿಕೆ; ಸಾಂಸ್ಥಿಕ ಸಾಧನೆಗಳು ಮತ್ತು ನಿರೀಕ್ಷೆಗಳು, ಪ್ರಾಚೀನ ಹಾಗೂ ಮಧ್ಯಕಾಲೀನ ಸಾಹಿತ್ಯ, ಆಧುನಿಕ ಸಾಹಿತ್ಯ, ವೈಚಾರಿಕತೆ ಮತ್ತು ಅಸಹಿಷ್ಣುತೆ, ವಿಶಿಷ್ಟ ಸಾಹಿತ್ಯ ಪ್ರಭೇದಗಳ ಕುರಿತು ವಿಷಯಗಳ ಮಂಡನೆ
ಆಗಲಿದೆ.
ಪತ್ರಕರ್ತ ಪದ್ಮರಾಜ ದಂಡಾವತಿ ಅಧ್ಯಕ್ಷತೆಯ ಸಮಿತಿ ವಿಷಯ ಮತ್ತು ತಜ್ಞರ ಆಯ್ಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.