ಹಾವೇರಿ: ಆಗಸ್ಟ್ ತಿಂಗಳ ಮಳೆಗೆ ಮನೆ ಕಳೆದುಕೊಂಡು ವಾಲ್ಮೀಕಿ ಭವನದಲ್ಲಿ ಆಶ್ರಯ ಪಡೆದಿದ್ದ ಕಾಟೇನಹಳ್ಳಿಯ ರೈತ ಹನುಮಂತಪ್ಪ ಫಕ್ಕೀರಪ್ಪ ಪವಾಡಿ (50) ಅವರು ಗ್ರಾಮದ ನೀರಿನ ಹೊಂಡದಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ.
ಹೊಂಡ ತುಂಬಿ ಕೋಡಿ ಬಿದ್ದಿದ್ದರಿಂದ ಗ್ರಾಮಸ್ಥರು ಶಾಸಕ ನೆಹರು ಓಲೇಕಾರ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ಬಾಗಿನ ಅರ್ಪಿಸಲು ಸಿದ್ಧತೆ ನಡೆಸುತ್ತಿದ್ದರು. ಆಗ ಶವ ಕಂಡುಬಂದಿದೆ.
‘ಅಪ್ಪ ಕೃಷಿಗಾಗಿ ಬ್ಯಾಂಕ್ನಲ್ಲಿ ಹಾಗೂ ಪರಿಚಿತರ ಬಳಿ ₹ 3 ಲಕ್ಷ ಸಾಲ ಮಾಡಿದ್ದರು. ಎರಡು ತಿಂಗಳ ಹಿಂದೆ ಸುರಿದ ಮಳೆಗೆ, ಮನೆ ಜತೆಗೆ ಎರಡೂವರೆ ಎಕರೆ ಜಮೀನು ನಾಶವಾಯಿತು. ಸರ್ಕಾರದಿಂದ ಪರಿಹಾರವೂ ಬರಲಿಲ್ಲ. ಇದೇ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೃತರ ಮಗಳು ರೇಣುಕಾ ಹೇಳಿದ್ದಾರೆ.