ನವದೆಹಲಿ : ಪ್ರಕರಣಗಳನ್ನು ವಿಚಾರಣೆಗಾಗಿ ಇತರ ನ್ಯಾಯಮೂರ್ತಿಗಳಿಗೆ ಹಂಚುವಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಇರುವ ಆಡಳಿತಾತ್ಮಕ ಅಧಿಕಾರದ ಬಗ್ಗೆ ಹಿರಿಯ ವಕೀಲ ಶಾಂತಿ ಭೂಷಣ್ ಸ್ಪಷ್ಟನೆ ಕೋರಿದ್ದಾರೆ.
ಶಾಂತಿ ಭೂಷಣ್ ಪರವಾಗಿ ಅವರ ಪುತ್ರ ಹಾಗೂ ವಕೀಲ ಪ್ರಶಾಂತ್ ಭೂಷಣ್ ಶುಕ್ರವಾರ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣಗಳ ಹಂಚಿಕೆಯಲ್ಲಿ ಅನುಸರಿಸಲಾಗುವ ಮಾನದಂಡ ಮತ್ತು ಪಾಲಿಸುವ ವಿಧಾನ ಯಾವುದು ಎಂದು ಪ್ರಶ್ನಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಅವರನ್ನು ಪ್ರತಿವಾದಿಗಳಾಗಿ ಹೆಸರಿಸಲಾಗಿದೆ. ಹೀಗಾಗಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಯ ಪೀಠಕ್ಕೆ ಒಪ್ಪಿಸದಂತೆ ಅವರು ಮನವಿ ಮಾಡಿದ್ದಾರೆ.
ಮೂವರು ಹಿರಿಯ ನ್ಯಾಯಮೂರ್ತಿಗಳು ಅರ್ಜಿಯನ್ನು ಯಾವ ಪೀಠಕ್ಕೆ ವಹಿಸಬೇಕು ಎನ್ನುವುದನ್ನು ನಿರ್ಣಯಿಸಲಿ ಎಂದು ಅವರು ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳು ಪ್ರಕರಣಗಳನ್ನು ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡುವಂತಿಲ್ಲ ಮತ್ತು ಇದರಲ್ಲಿ ಯಾವುದೇ ತಾರತಮ್ಯ ಮಾಡುವಂತಿಲ್ಲ. ಪ್ರಕರಣಗಳ ಹಂಚಿಕೆಯು ಮುಖ್ಯ ನ್ಯಾಯಮೂರ್ತಿಯ ಪರಮಾಧಿಕಾರ ಅಲ್ಲ ಮತ್ತು ಅದು ಪ್ರಶ್ನಾತೀತವಲ್ಲ ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಇದೇ ವಿಚಾರವಾಗಿ ಜನವರಿಯಲ್ಲಿ ಬಹಿರಂಗ ಬಂಡಾಯ ಸಾರಿದ್ದರು.