ಧಾರವಾಡ: ‘ಸೈನಿಕನೊಬ್ಬನ ಮಗನಾಗಿ ಹುಟ್ಟಿದ ಶಿವಾಜಿ ಮಹಾರಾಜರು ಛತ್ರಪತಿಯಾಗಿ ಕಟ್ಟಿದ ದೊಡ್ಡ ಸಾಮ್ರಾಜ್ಯದಿಂದಾಗಿ ಭಾರತದ ಇತಿಹಾಸದಲ್ಲಿ ಇಂದಿಗೂ ಅವರಿಗೆ ಅಗ್ರಮಾನ್ಯ ಸ್ಥಾನವಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಸೋಮವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಉತ್ತಮ ಆಡಳಿತಗಾರರೂ ಆಗಿದ್ದ ಶಿವಾಜಿ ಅವರು, ಜಗತ್ತಿಗೆ ಗೆರಿಲ್ಲಾ ಮಾದರಿಯ ಯುದ್ಧ ತಂತ್ರ ಪರಿಚಯಿಸಿದ್ದಾರೆ. ಅವರು ಮುಸ್ಲಿಂ ವಿರೋಧಿಗಳಾಗಿರಲಿಲ್ಲ. ಅವರ ತಾಯಿ ಜೀಜಾಬಾಯಿ, ಶಿವಾಜಿ ಅವರಿಗೆ ಬಾಲ್ಯದಲ್ಲೇ ಉದಾತ್ತ ಗುಣಗಳನ್ನು ಹೇಳಿಕೊಟ್ಟಿದ್ದರು. ಜೀಜಾ ಮಾತೆಯಂತೆ ನಾವೂ ಮಕ್ಕಳನ್ನು ಬೆಳೆಸಿ, ದೇಶಕ್ಕೆ ಉತ್ತಮ ಮಾನವ ಸಂಪನ್ಮೂಲ ನೀಡಬೇಕು’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪಾಲಿಕೆ ಸದಸ್ಯ ಹಾಗೂ ಜಿಲ್ಲಾ ಕ್ಷತ್ರಿಯ ಮರಾಠ ಪರಿಷತ್ ಅಧ್ಯಕ್ಷ ಶಂಕರ ಶೇಳಕೆ, ಮರಾಠ ವಿದ್ಯಾಪ್ರಸಾರಕ ಮಂಡಳ ಅಧ್ಯಕ್ಷ ಮಂಜುನಾಥ ಕದಂ ಮಾತನಾಡಿದರು.
‘ಶಿವಾಜಿ ಮಹಾರಾಜರ ಜೀವನ ಮತ್ತು ಸಾಧನೆ’ ವಿಷಯ ಕುರಿತು ಭೀಮರಾವ್ ಮಾನೆ, ವಿಶೇಷ ಉಪನ್ಯಾಸ ನೀಡಿದರು. ಮಾತನಾಡಿದರು. ಮರಾಠ ವಿದ್ಯಾಪ್ರಸಾರಕ ಮಂಡಳದ ವತಿಯಿಂದ ಗುಣಾಬಾಯಿ ಬರ್ಗೆ ಅವರಿಗೆ ಜೀಜಾಮಾತಾ ಪ್ರಶಸ್ತಿ ಹಾಗೂ ಪತ್ರಕರ್ತ ರವೀಶ ಪವಾರ್ ಅವರಿಗೆ ಛತ್ರಪತಿ ಶಿವಾಜಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಹಶೀಲ್ದಾರ್ ಪ್ರಕಾಶ ಕುದರಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಮುಖಂಡರಾದ ಕಿರಣ ಶಿಂಧೆ, ಶಹಾಜಿ ಶಿಂಧೆ, ಎಂ.ಎನ್.ಜಾಧವ, ಡಿ.ಬಿ.ಕೋಟ್ಕರ್, ವೈ.ಎಂ.ನಿಕ್ಕಂ, ಪಿ.ಜಿ.ವಾಡಕರ್ ಇದ್ದರು.
ಛತ್ರಪತಿ ಶಿವಾಜಿ ಪ್ರತಿಮೆಗೆ ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ, ಸಂಸದ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಮಾಲಾರ್ಪಣೆ ಮಾಡಿದರು. ನಂತರ ಶಿವಾಜಿ ಭಾವಚಿತ್ರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಜರುಗಿತು. ಎಲ್ಲೆಡೆ ಕೇಸರಿ ಧ್ವಜ ರಾರಾಜಿಸಿತು. ‘ಜೈ ಭವಾನಿ, ಜೈ ಶಿವಾಜಿ’ ಘೋಷಣೆ ಮೊಳಗಿತು.