ಹಾವೇರಿ: ಇಲ್ಲಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ ನಾರಾಯಣಗೌಡ ಬಿ.ಪಾಟೀಲ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಲೀಲಾವತಿ ಆದೇಶಿಸಿದ್ದಾರೆ.
ರಾಜ್ಯ ಲೆಕ್ಕಪತ್ರ ಇಲಾಖೆಯ ಪ್ರಥಮ ದರ್ಜೆ ಲೆಕ್ಕ ಸಹಾಯಕರಾಗಿದ್ದ ಪಾಟೀಲ, 2015ರ ಏಪ್ರಿಲ್ನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ನಿಯೋಜನೆಗೊಂಡಿದ್ದರು.
‘ನಾರಾಯಣಗೌಡ ಪಾಟೀಲ ವಾರದಿಂದಕೆಲಸಕ್ಕೆ ಗೈರಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ’ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ವಿನಾಯಕ ಹುಲ್ಲೂರ ಪತ್ರ ಬರೆದಿದ್ದರು.
ಐಟಿ ನೋಟಿಸ್?: ಬೆಂಗಳೂರಿನ ರಾಜಮಹಲ್ ಹೋಟೆಲ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಪಶಪಡಿಸಿಕೊಂಡ ₹1.5 ಕೋಟಿಗೂ ಅಧಿಕ ನಗದು ಪಾಟೀಲ ಅವರಿಗೆ ಸೇರಿದ್ದು ಎನ್ನಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.
ಪ್ರಮುಖರೊಬ್ಬರಿಗೆ ತಲುಪಿಸಲು ಗುತ್ತಿಗೆದಾರರಿಂದ ಶೇ 5ರಿಂದ 10ರಷ್ಟು ಕಮೀಷನ್ ರೂಪದಲ್ಲಿ ಪಾಟೀಲ ಹಣ ಸಂಗ್ರಹಿಸುತ್ತಿದ್ದರು ಎಂದು ಹೇಳಲಾಗಿದೆ. ದಾಳಿ ನಡೆಯುತ್ತಿದ್ದಂತೆ ಸ್ಥಳದಿಂದ ಪಾಟೀಲ ಪರಾರಿಯಾಗಿದ್ದು ಇನ್ನೂ ಪತ್ತೆಯಾಗಿಲ್ಲ. ಈ ವೇಳೆ ಅವರ ಕಾರು ಚಾಲಕನನ್ನು ವಶಕ್ಕೆ ಪಡೆದು ಹಣದ ಮೂಲದ ಬಗ್ಗೆ ಮಾಹಿತಿ ಕಲೆ ಹಾಕಲಾಗಿತ್ತು.