ಮುಂಡರಗಿ (ಗದಗ ಜಿಲ್ಲೆ): ಮುಂಡರಗಿ ತಾಲ್ಲೂಕಿನ ಕಪ್ಪತಗುಡ್ಡದ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸೋಮವಾರ ಸಂಜೆ ಬೆಂಕಿ ಬಿದ್ದಿದೆ.
ತಾಲ್ಲೂಕಿನ ಶಿರಹಟ್ಟಿ ರಸ್ತೆಯ ಗಡಿ ದುರುಗಮ್ಮನ ಗುಡಿಯ ಬಳಿ ಹಾಗೂ ತಾಲ್ಲೂಕಿನ ವಿರುಪಾಪುರ ತಾಂಡಾ, ಕೆಲೂರು, ಗುಡ್ಡದ ಬೂದಿಹಾಳ ಹಾಗೂ ಮತ್ತಿತರ ಗ್ರಾಮಗಳ ಬಳಿಯ ಗುಡ್ಡಕ್ಕೆ ಬೆಂಕಿ ವ್ಯಾಪಿಸಿದೆ.
ಗುಡ್ಡವು ಸಂಪೂರ್ಣವಾಗಿ ಒಣಗಿದ್ದರಿಂದ ಬೆಂಕಿಯು ಕ್ಷಣಾರ್ಧದಲ್ಲಿ ವ್ಯಾಪಿಸಿದ್ದು, ಬೆಂಕಿ ಹೇಗೆ ಹೊತ್ತಿಕೊಂಡಿದೆ ಎನ್ನುವುದು ತಿಳಿದು ಬಂದಿಲ್ಲ. ಇದು ಕಿಡಿಗೇಡಿಗಳ ಕೃತ್ಯವೂ ಇರಬಹುದು ಎಂದು ಶಂಕಿಸಲಾಗಿದೆ.
ಅಂದಾಜು 30 ಎಕರೆ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪರೂಪದ ಔಷಧೀಯ ಸಸ್ಯಗಳು, ಬೆಲೆಬಾಳುವ ಗಿಡ ಮರಗಳು, ಹಲವಾರು ವನ್ಯ ಜೀವಿಗಳು ಬೆಂಕಿಯಲ್ಲಿ ಸುಟ್ಟು ಹೋಗಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ, ಈ ಕುರಿತು ಪ್ರತಿಕ್ರಿಯೆ ಪಡೆಯಲು ವಲಯ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಲಾಯಿತು. ಆದರೆ ಅವರು ಲಭ್ಯರಾಗಲಿಲ್ಲ.