ಮಂಗಳೂರು: ಫಾರ್ಮಲಿನ್ ರಾಸಾಯನಿಕ ಬಳಸಲಾಗುತ್ತಿದೆ ಎಂಬ ಕಾರಣ ನೀಡಿ ಗೋವಾ ರಾಜ್ಯದಲ್ಲಿ ಕರ್ನಾಟಕದ ಮೀನಿಗೆ ನಿಷೇಧ ಹೇರಿರುವ ಕುರಿತು ಅಲ್ಲಿನ ರಾಜ್ಯ ಸರ್ಕಾರದ ಜೊತೆಗೆ ಚರ್ಚಿಸಿ, ಸಮಸ್ಯೆ ಪರಿಹರಿಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಿಂದ ಪೂರೈಕೆ ಆಗಿರುವ ಮೀನಿನಲ್ಲಿ ಫಾರ್ಮಲಿನ್ ಅಂಶ ಪತ್ತೆಯಾಗಿರುವ ಕುರಿತು ಖಚಿತ ಪುರಾವೆಗಳಿಲ್ಲ. ಗೋವಾ ಸರ್ಕಾರ ದಿಢೀರ್ ನಿಷೇಧ ಹೇರಿರುವುದರಿಂದ ರಾಜ್ಯದ ಮೀನುಗಾರರು ಮತ್ತು ವ್ಯಾಪಾರಿಗಳಿಗೆ ತೊಂದರೆ ಆಗಿದೆ’ ಎಂದರು.
ಗೋವಾ ಮೀನುಗಾರಿಕೆ ಸಚಿವರ ಜೊತೆ ಚರ್ಚೆಗೆ ಪ್ರಯತ್ನಿಸುವಂತೆ ರಾಜ್ಯದ ಮೀನುಗಾರಿಕೆ ಸಚಿವರಿಗೆ ಮನವಿ ಮಾಡಲಾಗಿದೆ. ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚಿಸಲಾಗುವುದು ಎಂದರು.