ಹೈದರಾಬಾದ್: ‘ಕಾಸ್ಟ್ ಕೌಚಿಂಗ್’ ವಿರುದ್ಧ ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದ ನಟಿ ಶ್ರೀರೆಡ್ಡಿ ಅವರ ಪ್ರತಿಭಟನಾ ವಿಡಿಯೊ ಅನ್ನು ಯಥಾವತ್ತಾಗಿ ಟ್ವಿಟರ್ನಲ್ಲಿ ಪ್ರಕಟಿಸಿರುವ ಆರೋಪದ ಮೇರೆಗೆ ನಟ ಪವನ್ ಕಲ್ಯಾಣ್ ವಿರುದ್ಧ ದೂರು ದಾಖಲಾಗಿದೆ.
‘ನಟನೆಗೆ ಅವಕಾಶ ಪಡೆಯಬೇಕಾದರೆ ನಟಿಯರು ಮಂಚಕ್ಕೇರುವಂಥ ಪರಿಸ್ಥಿತಿ ತೆಲುಗು ಚಿತ್ರರಂಗದಲ್ಲಿದೆ. ಇದಕ್ಕೆ ಹಿರಿಯ ಕಲಾವಿದರ ಬೆಂಬಲವೂ ಇದೆ’ ಎಂದಿದ್ದ ಶ್ರೀರೆಡ್ಡಿ, ಪ್ರತಿಭಟನಾರ್ಥವಾಗಿ ಅರೆನಗ್ನವಾಗಿದ್ದರು. ಇದರ ವಿಡಿಯೊ ಅನ್ನು ಕೆಲವು ಚಾನೆಲ್ಗಳು ಪ್ರಸಾರ ಮಾಡಿದ್ದವು.
ಪವನ್ ಅವರ ತಾಯಿಯ ವಿರುದ್ಧ ಶ್ರೀರೆಡ್ಡಿ ಹೇಳಿದ್ದ ಕೆಲವು ಆಕ್ಷೇಪಾರ್ಹ ಹೇಳಿಕೆಯನ್ನು ಮ್ಯೂಟ್ ಮಾಡಿ ಹಾಗೂ ಅರೆನಗ್ನವಿರುವ ಚಿತ್ರವನ್ನು ಬ್ಲರ್ ಮಾಡಿ ಟಿವಿಯಲ್ಲಿ ತೋರಿಸಲಾಗಿತ್ತು. ಆದರೆ ಪವನ್ ಕಲ್ಯಾಣ್ ಅವರು ತಮ್ಮ ಟ್ವಿಟರ್ನಲ್ಲಿ ಮ್ಯೂಟ್ ಹಾಗೂ ಬ್ಲರ್ ಮಾಡದ ಮೂಲ ವಿಡಿಯೊ ಹಾಕಿ ಅವು ಈ ಚಾನೆಲ್ಗಳಲ್ಲಿ ಬಂದಿದ್ದು ಎಂದು ಪ್ರಕಟಿಸಿದ್ದರು.
ಇದರಿಂದ ಸಿಟ್ಟಿಗೆದ್ದಿದ್ದ ಕೆಲವು ಅಭಿಮಾನಿಗಳು ಟಿವಿ–9 ತೆಲಗು ಹಾಗೂ ಎಬಿಎನ್ ಆಂಧ್ರಜ್ಯೋತಿ ವಾಹಿನಿಗಳ ವಾಹನಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಚಾನೆಲ್ಗಳು ಪವನ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಕಲಮುಗಳ ಅಡಿ ದೂರು ದಾಖಲಿಸಿವೆ.