ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟ ಪರಿಣಾಮ ಉಂಟಾದ ಪ್ರವಾಹದಿಂದ ಜಿಲ್ಲೆಯ ಹಡಗಲಿಯಲ್ಲಿ ಅತಿ ಹೆಚ್ಚಿನ ಮನೆಗಳಿಗೆ ಹಾನಿಯಾಗಿದೆ. ಹರಪನಹಳ್ಳಿ ಎರಡನೇ ಸ್ಥಾನದಲ್ಲಿದೆ.
ಈ ಎರಡೂ ತಾಲ್ಲೂಕುಗಳಿಗೆ ಮಾತ್ರ ಇದುವರೆಗೆ ಪರಿಹಾರಧನವನ್ನು ಬಿಡುಗಡೆ ಮಾಡಲಾಗಿದೆ. ಎರಡನೇ ಸ್ಥಾನದಲ್ಲಿದ್ದರೂ ಹರಪನಹಳ್ಳಿ ತಾಲ್ಲೂಕಿಗೆ ₹10.34 ಲಕ್ಷ ಪರಿಹಾರ ಧನ ವಿತರಿಸಲಾಗಿದೆ. ಹಡಗಲಿ ತಾಲ್ಲೂಕಿನಲ್ಲಿ ₹78 ಸಾವಿರ ಮಾತ್ರ ವಿತರಿಸಲಾಗಿದೆ.
ಈ ಎರಡೂ ತಾಲ್ಲೂಕಿನಲ್ಲೇ ಬೆಳೆಹಾನಿ ಪ್ರಮಾಣ ಹೆಚ್ಚಿದೆ. ಹಡಗಲಿ ತಾಲ್ಲೂಕಿನ ಹರವಿ, ಕುರುವತ್ತಿ, ಹರವಿ ಬಸಾಪುರ, ಲಿಂಗನಾಯಕನಹಳ್ಳಿ, ಮಕರಬ್ಬಿ, ಬ್ಯಾಲಹುಣಿಸಿ, ಹಿರೇಬನ್ನಿಮಟ್ಟಿ, ಹೊಳಲು, ಮೈಲಾರ, ಅಂಗೂರು, ಕೋಟಿಹಾಳ್, ಬೀರಬ್ಬಿ, ನವಲಿ ಗ್ರಾಮದಲ್ಲಿ ಭತ್ತ ಹಾಗೂ ಮೆಕ್ಕೆಜೋಳದ ಬೆಳೆ ನಷ್ಟವಾಗಿದೆ.
ಹರಪನಹಳ್ಳಿ ತಾಲ್ಲೂಕಿನ ಹುಲುವಾಗಲು, ತಾವರಗೊಂದಿ, ನಿಟ್ಟೂರು, ನಿಟ್ಟೂರು ಬಸಾಪುರ, ಕಡತಿ ಗ್ರಾಮದಲ್ಲಿ ಭತ್ತ, ತೊಗರಿ ಹಾಗೂ ಮೆಕ್ಕೆಜೋಳದ ಬೆಳೆ ನಷ್ಟವಾಗಿದೆ.
ಪ್ರವಾಹದಿಂದ ಹಡಗಲಿ ತಾಲ್ಲೂಕಿನ ಅತಿ ಹೆಚ್ಚು ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್ಗಳಿಗೆ ಹಾನಿಯಾಗಿದೆ. ಹಗರಿಬೊಮ್ಮನಹಳ್ಳಿ, ಹೊಸಪೇಟೆ ಮತ್ತು ಹರಪನಹಳ್ಳಿಯಲ್ಲೂ ಹಾನಿ ಸಂಭವಿಸಿದೆ.
ಐದು ಗಂಜಿ ಕೇಂದ್ರಗಳು:ಆಗಸ್ಟ್ 7ರಿಂದ 11ರವರೆಗೆ ಹಡಗಲಿಯಲ್ಲಿ 4, ಹರಪನಹಳ್ಳಿ ಮತ್ತು ಕಂಪ್ಲಿಯಲ್ಲಿ ತಲಾ 1 ಗಂಜಿಕೇಂದ್ರ ಸ್ಥಾಪಿಸಲಾಗಿದೆ.
ಹರಪನಹಳ್ಳಿಯ ನಿಟ್ಟೂರಿನಲ್ಲಿ 7ರಂದು, ಹಡಗಲಿ ತಾಲ್ಲೂಕಿನ ಕುರುವತ್ತಿಯಲ್ಲಿ ಆಗಸ್ಟ್8ರಂದು, ಬ್ಯಾಲಹುಣಸಿಯಲ್ಲಿ 10ರಂದು, ಹರವಿ ಮತ್ತು ಅಂಗೂರಿನಲ್ಲಿ11ರಂದು ತೆರೆಯಲಾಗಿದೆ. ಕಂಪ್ಲಿಯ ಕೋಟೆ ಪ್ರದೇಶದಲ್ಲಿ 11ರಂದು ತೆರೆಯಲಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳನ್ನೇ ಗಂಜಿ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ.