ಗಂಗಾವತಿ (ಕೊಪ್ಪಳ ಜಿಲ್ಲೆ): ತುಂಗಭದ್ರಾ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ತಾಲ್ಲೂಕು ಆಡಳಿತ ಸೋಮವಾರ ‘ರೆಡ್ ಅಲರ್ಟ್’ ಘೋಷಣೆ ಮಾಡಿದೆ.
ಜಲಾಶಯದಿಂದ ಮೊದಲ ಹಂತವಾಗಿ 35,829 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿತ್ತು. ಎರಡನೇ ಹಂತದಲ್ಲಿ ಇನ್ನೂ ಏರಿಕೆ ಮಾಡಿ 46,000 ಕ್ಯುಸೆಕ್ಗಿಂತ ಅಧಿಕ ನೀರು ಬಿಟ್ಟಿದ್ದರಿಂದ ಅಪಾಯಕಾರಿ ಪ್ರಮಾಣದಲ್ಲಿ ನೀರು ನದಿಯಲ್ಲಿ ಹರಿಯುತ್ತಿದೆ.
ವಿರುಪಾಪುರ ಗಡ್ಡೆಯು ಪುನಃ ಸಂಪರ್ಕ ಕಳೆದುಕೊಂಡಿದೆ. ವಿದೇಶಿ ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳ ಕಡೆಗೆ ಕಳುಹಿಸಲಾಗಿದೆ. ಆನೆಗೊಂದಿ ಸಮೀಪದ ತಳವಾರ ಘಟ್ಟದಲ್ಲಿರುವ ಗಣೇಶ ದೇವಸ್ಥಾನ, 64 ಕಂಬಗಳ ಮಂಟಪ ಸೇರಿದಂತೆ ವಿಜಯನಗರ ಕಾಲದ ನಾನಾ ಮಂಟಪಗಳು ಜಲಾವೃತಗೊಂಡಿವೆ.
ಕುಷ್ಟಗಿ ವರದಿ:ತಾಲ್ಲೂಕಿನಲ್ಲಿ ವ್ಯಾಪಕ ಮಳೆಯಾಗಿದ್ದರಿಂದ 300 ಮನೆಗಳು ಭಾಗಶಃ ಬಿದ್ದಿವೆ. ಮುದೇನೂರು ಬನ್ನಟ್ಟಿ ನಡುವಿನ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿದ್ದು ಸಂಪರ್ಕ ಕಡಿತಗೊಂಡಿದೆ.