ಬೆಂಗಳೂರು: ಮುಖ್ಯಮಂತ್ರಿ ವಿಕೋಪ ಪರಿಹಾರ ನಿಧಿಗೆ ವಿವಿಧ ಸಂಘಟನೆಗಳು, ದಾನಿಗಳು, ಕಂಪನಿಗಳು ನೆರವು ನೀಡುವುದನ್ನು ಮುಂದುವರಿಸಿದ್ದು,ಈವರೆಗೆ ₹188 ಕೋಟಿ ಸಂಗ್ರಹವಾಗಿದೆ.
ತೀವ್ರ ಪ್ರಮಾಣದಲ್ಲಿ ಪ್ರವಾಹ ಉಂಟಾದ ಸಮಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಡಿದ್ದ ಮನವಿಗೆ ಸಾರ್ವಜನಿಕರು ಸ್ಪಂದಿಸಿದ್ದಾರೆ. ಕಳೆದ ಆಗಸ್ಟ್ 13ರಿಂದ ದೇಣಿಗೆ ಸಂಗ್ರಹಿಸುತ್ತಿದ್ದು, ಈವರೆಗೆ 4,105 ಮಂದಿ ಹಣ ನೀಡಿದ್ದಾರೆ. ಆ. 20ರಂದು ಒಂದೇ ದಿನ ₹39.15 ಕೋಟಿ ಹರಿದು ಬಂದಿದೆ.
ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಮಳೆ ಅನಾಹುತ ಸಂಭವಿಸಿದ ಸಮಯದಲ್ಲಿ ₹186 ಕೋಟಿ ಸಂಗ್ರಹವಾಗಿದ್ದು, ಅದರಲ್ಲಿ ಇನ್ನೂ ₹97.17 ಕೋಟಿ ಉಳಿದಿದೆ. ಈ ಹಣವನ್ನೂ ನೆರೆ ಪರಿಹಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ.