ಮೈಸೂರು: ‘ಒಳ್ಳೆಯ ಮುಹೂರ್ತ ನೋಡಿ, ಶೀಘ್ರದಲ್ಲೇ ಕಾಂಗ್ರೆಸ್ ಸೇರಲಿದ್ದೇನೆ’ ಎಂದು ಅರಣ್ಯ ಸಚಿವ ಆರ್.ಶಂಕರ್ ಇಲ್ಲಿ ಶುಕ್ರವಾರ ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿ, ‘ನಾನು ಬಿಜೆಪಿ ಸೇರಲಿದ್ದೇನೆ ಎಂಬುದು ಮಾಧ್ಯಮಗಳ ಸೃಷ್ಟಿ. ಮಾಧ್ಯಮಗಳಿಂದಾಗಿ ಕೆಲವು ಗೊಂದಲಗಳು ಉಂಟಾಗಿವೆ. ಗೊಂದಲಗಳಿಗೆ ತೆರೆ ಎಳೆಯಲು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದೇನೆ’ ಎಂದರು.
‘ನಾನು ಸಚಿವ ಸಂಪುಟದಲ್ಲೇ ಇರುತ್ತೇನೆ. ಸಂಪುಟ ಪುನರ್ರಚನೆ ಹಾಗೂ ಖಾತೆ ಬದಲಾವಣೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಹೇಳಿದರು.
‘ನನಗೆ ಸಮ್ಮಿಶ್ರ ಸರ್ಕಾರದ ಮೇಲೆ ಅಸಮಾಧಾನವಿದೆ ಎಂಬುದು ಸುಳ್ಳು. ಯಾರ ಮೇಲೂ ಅಸಮಾಧಾನ ಇಲ್ಲ. ಸರ್ಕಾರ ಸುಭದ್ರವಾಗಿದೆ’ ಎಂದರು. ಶಂಕರ್ ಅವರು ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯಿಂದ (ಕೆಪಿಜೆಪಿ) ಗೆದ್ದು ಬಂದಿದ್ದರು.
ಅರಣ್ಯ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ವಿವಿಧ ಹುದ್ದೆಗಳಿಗೆ ಸುಮಾರು 60 ಸಾವಿರ ಅರ್ಜಿಗಳು ಬಂದಿದ್ದು, ಪರಿಶೀಲನೆ ನಡೆದಿದೆ. ಅಕ್ಟೋಬರ್ 7ರಂದು ಸಂದರ್ಶನ ನಡೆಯಲಿದೆ ಎಂದರು.