ಮಡಿಕೇರಿ: ನೆರೆ ಸಂತ್ರಸ್ತ ರೈತರಿಗೆ ವಿಶೇಷ ಪ್ಯಾಜೇಜ್ ಘೋಷಿಸಬೇಕು ಎಂದು ರೈತರು ಶನಿವಾರ ವಾಹನ ಜಾಥಾ ನಡೆಸಿದರು. ತಲಕಾವೇರಿಯಿಂದ ಬೆಂಗಳೂರಿಗೆ ಮಡಿಕೇರಿ ಮೂಲಕ ಜಾಥಾ ತೆರಳಿತು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತ್ವದಲ್ಲಿ ಈ ಜಾಥಾ ನಡೆಯುತ್ತಿದೆ.
ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ, ವಾಹನ ಜಾಥಾಕ್ಕೆ ನಿವೃತ್ತ ಮೇಜರ್ ಜನರಲ್ ಕುಪ್ಪಂಡ ನಂಜಪ್ಪ ಚಾಲನೆ ಚಾಲನೆ ನೀಡಿದರು.
ವಾಹನ ಜಾಥಾದಲ್ಲಿ ಸುಮಾರು 60ಕ್ಕೂ ಹೆಚ್ಚು ವಾಹನಗಳು ಪಾಲ್ಗೊಂಡಿದ್ದವು.ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿದರು.
ರಾಜ್ಯದ ವಿವಿಧೆಡೆ ಬರ, ನೆರೆ ಹಾನಿ ಉಂಟಾಗಿದ್ದರೂ ಯಾವುದೇ ಪರಿಹಾರ ದೊರಕಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಕಾಲಿಕ ಮಳೆ, ಬರ ನಿರ್ವಹಣೆ ಕಾಫಿ ಮತ್ತು ಕರಿಮೆಣಸು ಬೆಲೆ ಕುಸಿತದ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸಲಾಯಿತು.
ಸೇನೆಯ ಕೊಡಗು ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ರಾಜ್ಯ ಸಮಿತಿ ಪದಾಧಿಕಾರಿ ಚಾಮರಸ ಮಾಲಿ ಪಾಟೀಲ್, ಕೊಡವ ನ್ಯಾಷನಲ್ ಕೌನ್ಸಿಲ್ನ ನಂದಿನೆರವಂಡ ಯು ನಾಚಪ್ಪ ನೇತೃತ್ವ ವಹಿಸಿದ್ದರು.
ಮಡಿಕೇರಿ–ಮೂರ್ನಾಡು–ವಿರಾಜಪೇಟೆ– ಗೋಣಿಕೊಪ್ಪಲು– ಹುಣಸೂರು– ಮೈಸೂರು– ಮಂಡ್ಯ– ಚನ್ನಪಟ್ಟಣ, ಮಾರ್ಗವಾಗಿ ಜಾಥಾ ಸಾಗಲಿದೆ.ಇದೇ 14ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ನಡೆವ ಬೃಹತ್ ಸಮಾವೇಶದಲ್ಲಿ ರೈತರು ಪಾಲ್ಗೊಳ್ಳಲಿದ್ದಾರೆ.