ಮಡಿಕೇರಿ: ‘ರಾಜ್ಯದಲ್ಲಿ ಇನ್ನೂ ನಾಲ್ಕು ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸಲು ತೀರ್ಮಾನಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಲ್ಲಿ ಸೋಮವಾರ ಹೇಳಿದರು.
‘ಕೇಂದ್ರದ ಸಹಯೋಗದಲ್ಲಿ ಯಾದಗಿರಿ, ಚಿಕ್ಕಮಗಳೂರು, ಹಾವೇರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೀಘ್ರವೇ ಹೊಸ ಕಾಲೇಜು ಸ್ಥಾಪಿಸಲಾಗುವುದು. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ವೈದ್ಯಕೀಯ ಕಾಲೇಜು ಇರಬೇಕೆಂಬುದು ಸರ್ಕಾರದ ಅಪೇಕ್ಷೆ’ ಎಂದೂ ಅವರು ಹೇಳಿದರು.
‘ಎಚ್ಡಿಕೆ ಕೊಡುಗೆ ಶೂನ್ಯ’:ಸಂಸದ ಪ್ರತಾಪ ಸಿಂಹ ಮಾತನಾಡಿ, ‘22 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದ ವೇಳೆ ಆಗ ತಾನೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿ.ಎಸ್.ಯಡಿಯೂರಪ್ಪ ಏಕಾಂಗಿಯಾಗಿ ರಾಜ್ಯವನ್ನು ಸುತ್ತಿದ್ದರು. ಸಂತ್ರಸ್ತರ ಕಣ್ಣೀರು ಒರೆಸಿದ್ದರು. ಉದಾರತನ ತೋರಿದ್ದ ಅವರು ಕುಸಿದು ಬಿದ್ದ ಪ್ರತಿ ಮನೆಗೆ ₹ 5 ಲಕ್ಷ ಪರಿಹಾರ ಘೋಷಿಸಿದ್ದರು. ಇಷ್ಟು ದೊಡ್ಡ ಮೊತ್ತದ ಪರಿಹಾರವನ್ನು ದೇಶದ ಯಾವ ಮುಖ್ಯಮಂತ್ರಿಯೂ ನೀಡಿಲ್ಲ’ ಎಂದು ಹೊಗಳಿದರು.
‘2018ರಲ್ಲೂ ಕೊಡಗಿನಲ್ಲೂ ಪ್ರವಾಹ ಉಂಟಾಗಿತ್ತು. ರಾಜ್ಯದ ಜನರೇ ನೀಡಿದ್ದ ನೆರವಿನಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ₹ 197 ಕೋಟಿಯಲ್ಲಿ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಒಬ್ಬ ಸಂತ್ರಸ್ತರಿಗೂ ಅವರಿಂದ ಮನೆ ನೀಡಲು ಆಗಿರಲಿಲ್ಲ. ಸಂತ್ರಸ್ತರು ನರಳುವಂತೆ ಆಗಿತ್ತು. ಅಂದು ಮಾದಾಪುರದಲ್ಲಿ ಕುಮಾರಸ್ವಾಮಿ ಅವರು ಬರೀ ಬಹದ್ದೂರ್ ಗಿರಿ ಮಾತನಾಡಿದ್ದರು. ಅಂದೇ ಅವರಿಗೆ ತಿರುಗೇಟು ನೀಡಿದ್ದೆ. ಈ ಜಿಲ್ಲೆಗೆ ಕುಮಾರಸ್ವಾಮಿ ಕೊಡುಗೆ ಶೂನ್ಯ’ ಎಂದು ಪ್ರತಾಪ ಸಿಂಹ ಕಿಡಿಕಾರಿದರು.
ಜನರ ಬೇಡಿಕೆ ಈಡೇರಿಕೆ: ‘ಮೈತ್ರಿ’ ಸರ್ಕಾರದ ಅವಧಿಯಲ್ಲಿ ಬಜೆಟ್ ಮಂಡಿಸಿದ್ದ ಎಚ್.ಡಿ.ಕುಮಾರಸ್ವಾಮಿ, ಈಗಿನ ಜಿಲ್ಲಾ ಆಸ್ಪತ್ರೆಯನ್ನೇ ಮೇಲ್ದರ್ಜೆಗೇರಿಸುವ ಘೋಷಣೆ ಮಾಡಿದ್ದರು. ₹ 100 ಕೋಟಿ ಅನುದಾನದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸುವ ಭರವಸೆ ನೀಡಲಾಗಿತ್ತು.