ಮೈಸೂರು: ‘ಫ್ರೀ ಕಾಶ್ಮೀರ’ ಫಲಕ ಹಿಡಿದು ವಿವಾದಕ್ಕೆ ಒಳಗಾಗಿರುವ ಬಿ.ನಳಿನಿ ಪರ ವಕಾಲತ್ತು ವಹಿಸಿದ್ದ ವಕೀಲ ಪೃಥ್ವಿ, ವೈಯಕ್ತಿಕ ಕಾರಣ ನೀಡಿ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
ಇದರ ಬೆನ್ನಲ್ಲೇ ಈ ಪ್ರಕರಣದಲ್ಲಿ ಯಾರೂ ವಕಾಲತ್ತು ವಹಿಸಬಾರದೆಂದು ನಿರ್ಣಯ ಕೈಗೊಳ್ಳಲು ವಕೀಲರ ಸಂಘಕ್ಕೆ ಕೆಲವರು ಮನವಿ ಮಾಡಿದ್ದಾರೆ. ಈ ಮನವಿಯಲ್ಲಿ ಯಾರೊಬ್ಬರ ಸಹಿ ಇರದೆ, ಸರ್ವ ಸದಸ್ಯರು ಎಂದಷ್ಟೇ ಇದೆ.
‘ಇಂಥ ಮನವಿ ಬಂದಿರುವುದು ನಿಜ. ಈ ಕುರಿತು ಚರ್ಚಿಸಲು ಇನ್ನೂ ಸರ್ವ ಸದಸ್ಯರ ಸಭೆ ಕರೆದಿಲ್ಲ. ನಳಿನಿ ಪರ ವಕಾಲತ್ತು ವಹಿಸಿದ್ದ ವಕೀಲರು ವೈಯಕ್ತಿಕ ಕಾರಣ ನೀಡಿ ಹಿಂದೆ ಸರಿದಿರುವುದಾಗಿ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ್ದಾರೆ’ ಎಂದು ವಕೀಲರ ಸಂಘದ ಅಧ್ಯಕ್ಷ ಆನಂದಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.