ಬೆಂಗಳೂರು: ಸಮ್ಮಿಶ್ರ ಸರ್ಕಾರದಮುಂದಿನ ಬಜೆಟ್ನಲ್ಲಿ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ಕ್ಕೆ (ಸಿಎಂಪಿ) ಒತ್ತು ನೀಡುವ ಅಗತ್ಯದ ಬಗ್ಗೆ ಕಾಂಗ್ರೆಸ್ ಸಚಿವರ ಸಭೆಯಲ್ಲಿ ಚರ್ಚಿಸಲಾಗಿದೆ.
ಪಕ್ಷದ ಸಚಿವರಿಗೆ ಅಶೋಕ ಹೋಟೆಲ್ನಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಸೋಮವಾರ ಉಪಾಹಾರ ಕೂಟ ಆಯೋಜಿಸಿದ್ದರು. 2019–20ರ ಬಜೆಟ್ನಲ್ಲಿ ಯಾವೆಲ್ಲ ಅಂಶಗಳನ್ನು ಸೇರಿಸಬೇಕು ಎಂಬ ಬಗ್ಗೆ ಈ ವೇಳೆ ಚರ್ಚೆ ನಡೆದಿದೆ.
‘ಪ್ರಜಾವಾಣಿ’ ಜೊತೆ ಮಾತನಾಡಿದ ಪರಮೇಶ್ವರ, ‘ಎರಡೂ (ಜೆಡಿಎಸ್–ಕಾಂಗ್ರೆಸ್) ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಬೇರೆಬೇರೆ ಭರವಸೆಗಳನ್ನು ನೀಡಿ ಚುನಾವಣೆ ಎದುರಿಸಿವೆ. ಕೃಷಿ, ಶಿಕ್ಷಣ, ವೈದ್ಯಕೀಯ ಹೀಗೆ ವಿವಿಧ ವಲಯಗಳಿಗೆ ಬಜೆಟ್ನಲ್ಲಿ ಹಣ ಮೀಸಲಿಡುವ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಯಿತು’ ಎಂದರು.
‘ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಶಾಸಕರ ಬೇಡಿಕೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಪರಮೇಶ್ವರ ವಿವರಿಸಿದರು.