ಬೆಂಗಳೂರು: ಇಂದು ಮಧ್ಯಾಹ್ನ 2 .12ರ ಕನ್ಯಾಲಗ್ನಕ್ಕೆ ಮೈತ್ರಿ ಸರ್ಕಾರದ ಸಚಿವ ಸಂಪುಟದ ಪ್ರಮಾಣ ವಚನಕ್ಕೆ ಮುಹೂರ್ತವೇನೋ ಫಿಕ್ಸ್ ಆಗಿದೆ. ಆದರೆ ಗಂಟೆ 11.12 ದಾಟಿದರೂ ಎರಡೂ ಪಕ್ಷಗಳಲ್ಲಿ ಗೊಂದಲ ದೂರವಾಗಿಲ್ಲ. ಎರಡೂ ಪಕ್ಷಗಳಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಕೊನೆಯ ಕ್ಷಣದ ಅದೃಷ್ಟಪರೀಕ್ಷೆ ಮುಂದುವರಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಡಿ.ಕೆ. ಶಿವಕುಮಾರ್, ಜಮೀರ್ ಅಹಮದ್, ಶಿವಾನಂದ ಪಾಟೀಲ, ಆರ್.ವಿ. ದೇಶಪಾಂಡೆ, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ, ಯು.ಟಿ. ಖಾದರ್, ಪುಟ್ಟರಂಗಶೆಟ್ಟಿ, ಜಯಮಾಲಾ , ಕೆ.ಜೆ. ಜಾರ್ಜ್, ಎಂ.ಬಿ.ಪಾಟೀಲ, ಶಾಮನೂರು ಶಿವಶಂಕರಪ್ಪ ಸಂಭಾವ್ಯರು ಎನ್ನುವುದು ಬಹುತೇಕ ಅಂತಿಮಗೊಂಡಿದೆ.
ಆದರೆ ಜೆಡಿಎಸ್ ಪಕ್ಷದಲ್ಲಿ ಗೊಂದಲ ಇನ್ನೂ ಮುಂದುವರಿದಿದೆ. ಗಂಟೆಗೊಂದು, ಗಳಿಗೆಗೊಂದು ಪಟ್ಟಿಗಳನ್ನು ತೇಲಿಬಿಡಲಾಗುತ್ತಿದೆ. ಹೀಗೆ ಹೆಸರು ತೇಲಿಬಿಡುವುದನ್ನೂ ಆಕಾಂಕ್ಷಿಗಳು ಒಂದು ತಂತ್ರವಾಗಿಸಿಕೊಂಡಿದ್ದಾರೆ.
ಅಲ್ಲಿದ್ರೂ ಆಗ್ತಿದ್ದೆ:
‘ನಾನು ಸಚಿವನಾಗುವುದು ಖಚಿತ. ಆದರೆ ಯಾವ ಖಾತೆ ಅಂತ ಇನ್ನೂ ಗೊತ್ತಾಗಿಲ್ಲ’ ಎಂದು ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಪ್ರತಿಕ್ರಿಯಿಸಿದರು. ‘ನಾನು ಅಲ್ಲಿದ್ರೂ (ಜೆಡಿಎಸ್) ಮಿನಿಸ್ಟ್ರು ಆಗ್ತಿದ್ದೆ. ಈಗ ಇಲ್ಲಿ ಅವಕಾಶ ಸಿಕ್ಕಿದೆ’ ಎಂದು ಹೇಳಿದರು.
ಇನ್ನೂ ಅಂತಿಮಗೊಂಡಿಲ್ಲ:
ಯಾರೆಲ್ಲಾ ಸಚಿವರಾಗಲಿದ್ದಾರೆ ಎಂಬ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ನೀವು ಮಾಧ್ಯಮದವರು ಕೇಳ್ತೀರಿ, ನಿಮಗೆ ಬೇಸರವಾಗಬಾರದು ಅಂತ ನಾವು ಮಾತಾಡ್ತಾ ಇದ್ದೀವಿ’ ಎಂದು ಕನಕಪುರದ ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು.