ಬೆಂಗಳೂರು: ಬೆಳಗಾವಿ ಸುವರ್ಣ ಸೌಧದ ಗೇಟು ಮುರಿಯಲು ಮುಂದಾದವರು ರೈತರ ಕುಲಕ್ಕೆ ಅವಮಾನಿಸುವ ಗೂಂಡಾಗಳು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಕೃಷಿ ಮೇಳದ ಸಮಾರೋಪದಲ್ಲಿ ಮಾತನಾಡಿದ ಅವರು, ಪ್ರತಿಭಟನಕಾರರ ವರ್ತನೆಗೆ ತೀವ್ರ ಅಸಹನೆ ವ್ಯಕ್ತಪಡಿಸಿ ಇಂಥರ ವರ್ತನೆಗೆ ಕ್ರಮ ತೆಗೆದುಕೊಳ್ಳದೆ ಸುಮ್ಮನೆ ಬಿಡಬೇಕೇ ಎಂದು ಗುಡುಗಿದರು.
‘ನಾಲ್ಕೂವರೆ ವರ್ಷಗಳ ಹಿಂದೆ ಯಾರಿಗೋ ಮತ ಹಾಕಿದ್ದೀರಿ. ಅಂದು ಆಯ್ಕೆಯಾದವರು ನಿಮ್ಮ ಸಮಸ್ಯೆಗೆ ಸ್ಪಂದಿಸದಿದ್ದರೆ ನಾನು ಹೊಣೆಯೇ? ಜಿಲ್ಲಾಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿ ನಿಮಗೆ (ರೈತರಿಗೆ) ನ್ಯಾಯಯುತ ಬೆಲೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದು ತಮ್ಮ ಆಡಳಿತವನ್ನು ಸಮರ್ಥಿಸಿಕೊಂಡರು.
ಎಲ್ಲಿ ಮಲಗಿದ್ದೆ ನೀನು?
‘ಆಡಳಿತ ನಡೆಸಲು ಕುಮಾರಸ್ವಾಮಿ ನಾಲಾಯಕ್ ಎಂದು ಮಹಿಳೆಯೊಬ್ಬಳು ನನ್ನನ್ನು ನಿಂದಿಸಿದ್ದಾಳೆ. ನಾಲ್ಕೂವರೆ ವರ್ಷಗಳ ಹಿಂದೆ ಯಾವುದೋ ಕಂಪನಿಯವರು ಕಬ್ಬಿಗೆ ಸರಿಯಾದ ದರ ನೀಡಿಲ್ಲ ಎಂಬ ಕಾರಣಕ್ಕೆ ನಾನು ಹೇಗೆ ನಾಲಾಯಕ್ ಆಗುತ್ತೇನೆ? ಇದಕ್ಕೂ ನನಗೂ ಏನು ಸಂಬಂಧ? ನಾಲ್ಕು ವರ್ಷಗಳ ಕಾಲ ಎಲ್ಲಿ ಮಲಗಿದ್ದೆ ನೀನು? ಎಂದು ಬೆಳಗಾವಿಯಲ್ಲಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಮಹಿಳೆಯನ್ನು ಕಟು ಮಾತುಗಳಲ್ಲಿ ಜರಿದರು.
‘ಮಾಧ್ಯಮದವರೇ ಲಾರಿ ಕೆಳಗೆ ರೈತರನ್ನು ಮಲಗಿಸಿ ವಿಡಿಯೋ ಮಾಡಿ ಟಿವಿಗಳಲ್ಲಿ ಭಿತ್ತರಿಸುತ್ತಾರೆ. ಈ ಹೋರಾಟಗಳಿಗೆ ಅವರೇ ಪ್ರಾಯೋಜಕರು. ಎಷ್ಟೋ ಮಾಧ್ಯಮದವರಿಗೆ ನಾನು ಅಧಿಕಾರದಲ್ಲಿರುವುದನ್ನು ಸಹಿಸಲು ಆಗುತ್ತಿಲ್ಲ’ ಎಂದು ಚುಚ್ಚಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.