ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಆರೋಪಿಗಳಾದ ಅಮಿತ್ ದೆಗ್ವೇಕರ್ ಹಾಗೂ ಮಡಿಕೇರಿಯ ರಾಜೇಶ್ ಬಂಗೇರನನ್ನು ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಕೊಲೆ ಪ್ರಕರಣದ ವಿಚಾರಣೆಗಾಗಿ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಮೋಲ್ ಕಾಳೆ, ಅಮಿತ್ ಹಾಗೂ ಬಂಗೇರನನ್ನು ವಶಕ್ಕೆ ಪಡೆಯಲು ಅನುಮತಿ ಕೋರಿ ಸಿಬಿಐ ಅಧಿಕಾರಿಗಳು ಪುಣೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಮನವಿಯನ್ನು ನ್ಯಾಯಾಧೀಶರು ಪುರಸ್ಕರಿಸಿದ್ದರು. ಶುಕ್ರವಾರ ಬೆಂಗಳೂರಿಗೆ ಬಂದ ಸಿಬಿಐ ತಂಡ, ಆದೇಶದ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಅನುಮತಿ ಪಡೆದುಕೊಂಡಿತು.
ರಾತ್ರಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಹೋದ ತಂಡ, ಅಮಿತ್ ಹಾಗೂ ಬಂಗೇರನನ್ನು ವಶಕ್ಕೆ ಪಡೆದುಕೊಂಡಿತು. ಶನಿವಾರ ಮಧ್ಯಾಹ್ನ ಅವರನ್ನು ಪುಣೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹತ್ತುದಿನ ವಶಕ್ಕೆ ಪಡೆದಿದ್ದಾರೆ.
ಕಾಳೆ ಬಿಟ್ಟಿದ್ದೇಕೆ: ಅಮಿತ್ ಹಾಗೂ ಬಂಗೇರನನ್ನು ಮೊದಲು ವಿಚಾರಣೆ ನಡೆಸಿ, ಅವರು ನೀಡುವ ಮಾಹಿತಿ ಆಧರಿಸಿ ನಂತರ ಕಾಳೆಯನ್ನು ವಶಕ್ಕೆ ಪಡೆಯಲು ಸಿಬಿಐ ನಿರ್ಧರಿಸಿದೆ ಎನ್ನಲಾಗಿದೆ.
ದಾಭೋಲ್ಕರ್ ಹತ್ಯೆ ಪ್ರಕರಣದ ಆರೋಪಿ ಸಚಿನ್ ಪ್ರಕಾಶ್ರಾವ್ ಅಂಧುರೆಗೆ ಬಂಗೇರ ಶಸ್ತ್ರಾಸ್ತ್ರ ತರಬೇತಿ ನೀಡಿದ್ದರೆ, ಅಮಿತ್ ಹಾಗೂ ಕಾಳೆಯು ಹತ್ಯೆಗೆ ಸಂಚು ರೂಪಿಸುವುದರ ಜತೆಗೆ ಹಂತಕನಿಗೆ ಮಾರ್ಗದರ್ಶನ ಮಾಡಿದ್ದಾರೆ ಎಂದು ಸಿಬಿಐ ನ್ಯಾಯಾಲಯಕ್ಕೆ ಹೇಳಿದೆ.