ಚಿತ್ರದುರ್ಗ: ‘ಬಿಜೆಪಿ ಬಾದಾಮಿ ಅಭ್ಯರ್ಥಿ ಶ್ರೀರಾಮುಲು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸೋಲಿನ ಭೀತಿ ಹೆಚ್ಚಾಗಿದೆ. ಹೀಗಾಗಿ ಅವರು ಪ್ರಚಾರಕ್ಕೆ ಚಿತ್ರನಟರ ಮೊರೆಹೋಗಿದ್ದಾರೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಅವರು ನಾಯಕನಹಟ್ಟಿಯಲ್ಲಿ ಶನಿವಾರ ಚುನಾವಣಾ ಪ್ರಚಾರಕ್ಕೂ ಮುನ್ನ ಗುರುತಿಪ್ಪೇರುದ್ರಸ್ವಾಮಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ನಾನು ಯಾವ ನಟರನ್ನೂ ಪ್ರಚಾರಕ್ಕೆ ಆಹ್ವಾನಿಸಿಲ್ಲ. ಸ್ಟಾರ್ ನಟರು ಒಂದುಕಡೆ ಬಿಜೆಪಿ ಎಂದರೆ ಮತ್ತೊಂದು ಕಡೆ ಕಾಂಗ್ರೆಸ್, ಜೆಡಿಎಸ್ ಅಂತಾರೆ. ಅವರಿಗೆ ವಚನಬದ್ಧತೆ ಇದೆಯೇ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
‘ಪ್ರಧಾನಿ ನರೇಂದ್ರ ಮೋದಿ ಅವರಿಗಾಗಲಿ, ಸಿದ್ದರಾಮಯ್ಯನವರಿಗಾಗಲಿ ನಮ್ಮ ವಿರುದ್ದ ಮಾತನಾಡಲು ವಿಷಯವಿಲ್ಲ. ಹೀಗಾಗಿ ಅವರು ‘ಒಳ ಒಪ್ಪಂದದ’ ಆರೋಪ ಮಾಡುತ್ತಾರೆ’ ಎಂದು ಆರೋಪಿಸಿದರು.
ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.