ಬೆಂಗಳೂರು: ಕರ್ನಾಟಕ ಹಾಗೂ ಕೇರಳ ಗಡಿಯಲ್ಲಿ ದಿಗ್ಬಂಧನ ವಿಧಿಸಿದ್ದರೂ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಅನ್ನು ಪೊಲೀಸರು ತಡೆದು ನಿಲ್ಲಿಸುವುದು ಅಮಾನವೀಯ. ಈ ಕುರಿತು ರಾಜ್ಯ ಸರ್ಕಾರ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ಈ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಅವರು, ಕರ್ನಾಟಕ ಮತ್ತು ಕೇರಳದ ಗಡಿಯಲ್ಲಿ ದಿಗ್ಭಂಧನ ವಿಧಿಸಿರುವ ಹಿನ್ನೆಲೆಯಲ್ಲಿ ಹಲವು ಧಾರುಣ ಘಟನೆಗಳು ವರದಿಯಾಗುತ್ತಿದ್ದು, ಕನ್ನಡಿಗರು ಹೆಚ್ಚಾಗಿರುವ ಕಾಸರಗೋಡು, ಮಂಜೇಶ್ವರ ಮುಂತಾದೆಡೆಯಿಂದ ನೂರಾರು ರೋಗಿಗಳು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಬರುತ್ತಾರೆ. ನೂರಕ್ಕೂ ಹೆಚ್ಚು ಆ್ಯಂಬುಲೆನ್ಸ್ಗಳು ಸಂಚರಿಸುತ್ತಿದ್ದವು, ಗಡಿಯಲ್ಲಿ ಸಂಚಾರಕ್ಕೆ ತಡೆ ನೀಡಿರುವುದರಿಂದಾಗಿ ತೊಂದರೆಯುಂಟಾಗಿದೆ. ಇತ್ತೀಚೆಗೆ ಮಂಗಳೂರಿನ ಮಹಿಳೆಯೊಬ್ಬರು ಮಂಜೇಶ್ವರದಿಂದ ತುರ್ತು ಚಿಕಿತ್ಸೆಗಾಗಿ ಮಂಗಳೂರಿಗೆ ಆ್ಯಂಬುಲೆನ್ಸ್ನಲ್ಲಿ ಬಂದದ್ದನ್ನು ತಡೆದು ವಾಪಸ್ ಕಳಿಸಲಾಗಿದೆ. ಇದರಿಂದಾಗಿ ಮಹಿಳೆ ಮೃತಪಟ್ಟಿದ್ದಾರೆ.
ಕರ್ನಾಟಕ ಹಾಗೂ ಕೇರಳ ಗಡಿಯಲ್ಲಿ ದಿಗ್ಬಂಧನ ವಿಧಿಸಿದ್ದರೂ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ಅ್ಯಂಬುಲೆನ್ಸ್ ಅನ್ನು ಪೊಲೀಸರು ತಡೆದು ನಿಲ್ಲಿಸುವುದು ಅಮಾನವೀಯ. ಈ ಕುರಿತು ರಾಜ್ಯ ಸರ್ಕಾರ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು.@CMofKarnataka
— H D Devegowda (@H_D_Devegowda) April 1, 2020
(1/2) pic.twitter.com/UAo2fluggf
ಮತ್ತೊಬ್ಬ ಗರ್ಭಿಣಿ ಕಾಸರಗೋಡಿನಿಂದ ಹೆರಿಗೆಗಾಗಿ ಮಂಗಳೂರಿಗೆ ಬರುವಾಗ ಆ್ಯಂಬುಲೆನ್ಸ್ ತಡೆದು ನಿಲ್ಲಿಸಿದಾಗ ಅಲ್ಲೇ ಹೆರಿಗೆಯಾಗಿದೆ. ಕ್ಯಾನ್ಸರ್, ಹೃದಯ ಮತ್ತು ಮೂತ್ರಕೋಶ ಸಂಬಂಧಿ ತುರ್ತು ಹಾಗೂ ಉನ್ನತ ಚಿಕಿತ್ಸೆಗೆ ಗಡಿಭಾಗದ ಬಹುತೇಕರು ಮಂಗಳೂರನ್ನೇ ಆಶ್ರಯಿಸಿದ್ದಾರೆ. ಪೊಲೀಸರು ತುರ್ತು ಪ್ರಕರಣಗಳಿದ್ದಾಗ ಆ್ಯಂಬುಲೆನ್ಸ್ ನಿಲ್ಲಿಸುವುದು ಅಮಾನವೀಯ. ದಿನಬಳಕೆಯ ವಸ್ತುಗಳ ವಾಹನಗಳನ್ನು ತಡೆಹಿಡಿಯಲಾಗಿದೆ ಮತ್ತು ಈಗಾಗಲೇ 7 ಜನರು ಮೃತಪಟ್ಟಿರುವುದು ವರದಿಯಾಗಿದೆ. ಕೂಡಲೇ ಈ ಘಟನೆಗಳ ಬಗ್ಗೆ ಗಮನಹರಿಸಿ ತುರ್ತು ಪ್ರಕರಣಗಳಲ್ಲಿ ಆ್ಯಂಬುಲೆನ್ಸ್ಗಳನ್ನು ಒಳಗೆ ಬಿಡುವಂತೆ ಕ್ರಮ ಕೈಗೊಳ್ಳಬೇಕು. ಈ ಕುರಿತು ಮುತುವರ್ಜಿ ವಹಿಸಲು ಅಧಿಕಾರಿಗಳನ್ನು ನೇಮಿಸಬೇಕು.
ಕರಾವಳಿ ಕರ್ನಾಟಕದಲ್ಲಿ ಮೀನು ಜನತೆಯ ಪ್ರಮುಖ ಆಹಾರವಾಗಿದ್ದು ಮೀನುಗಾರಿಕೆ ನಿಷೇಧವನ್ನು ಸರ್ಕಾರ ಹಿಂತೆಗೆದುಕೊಂಡು ದಿನವೊಂದಕ್ಕೆ ನಿರ್ದಿಷ್ಟ ಬೋಟ್ ಗಳು ಮೀನುಗಾರಿಕೆ ನಡೆಸುವುದು ಹಾಗೂ ನಿಯಮಗಳ ಪ್ರಕಾರ ದೂರ ದೂರ ಕುಳಿತು ಮೀನು ಮಾರಾಟಕ್ಕೂ ಅವಕಾಶ ನೀಡುವ ಕುರಿತು ಮಾನ್ಯ ಮುಖ್ಯಮಂತ್ರಿಗಳಾದ @BSYBJPಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು.
— H D Devegowda (@H_D_Devegowda) April 1, 2020
2/2
ಕರಾವಳಿ ಕರ್ನಾಟಕದಲ್ಲಿ ಮೀನು ಜನತೆಯ ಪ್ರಮುಖ ಆಹಾರವಾಗಿದ್ದು ಮೀನುಗಾರಿಕೆ ನಿಷೇಧವನ್ನು ಸರ್ಕಾರ ಹಿಂತೆಗೆದುಕೊಳ್ಳಬೇಕು. ದಿನವೊಂದಕ್ಕೆ ನಿರ್ದಿಷ್ಟ ಬೋಟ್ಗಳು ಮೀನುಗಾರಿಕೆ ನಡೆಸುವುದು ಹಾಗೂ ನಿಯಮಗಳ ಪ್ರಕಾರ ದೂರ ದೂರ ಕುಳಿತು ಮೀನು ಮಾರಾಟಕ್ಕೂ ಅವಕಾಶ ನೀಡುವ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.