ಧಾರವಾಡ: ವಿವಿಧ ಅಪರಾಧ ಪ್ರಕರಣಗಳಲ್ಲಿಉತ್ತರ ಕರ್ನಾಟಕ ಭಾಗದಲ್ಲಿ ವಶಪಡಿಸಿಕೊಂಡಿದ್ದ ಬೆಲೆಬಾಳುವ 37 ಟನ್ ರಕ್ತಚಂದನ ಹರಾಜು ಮಾಡಿದ್ದು, ವಿದೇಶಿಯರು ₹ 6.72 ಕೋಟಿಗೆ ಬಿಡ್ ಮಾಡಿದ್ದಾರೆ.
2016ರಿಂದ ಅರಣ್ಯ ಇಲಾಖೆಯು ಐದು ಪ್ರಕರಣಗಳಲ್ಲಿ 40 ಟನ್ ರಕ್ತಚಂದನ ವಶಪಡಿಸಿಕೊಂಡಿತ್ತು. ಬಳಿಕ ಅದನ್ನು ಇಲ್ಲಿರುವ ಉತ್ತರ ಕರ್ನಾಟಕದ ಶ್ರೀಗಂಧ ಡಿಪೊದಲ್ಲಿ ಸಂಗ್ರಹಿಸಲಾಗಿತ್ತು.
ಇತ್ತೀಚೆಗೆ ನಡೆದ ಜಾಗತಿಕ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಚೀನಾ ಮತ್ತು ಜಪಾನ್ ದೇಶದವರು 40 ಟನ್ ರಕ್ತಚಂದನದ ಪೈಕಿ 37 ಟನ್ ಖರೀದಿ ಮಾಡಿದ್ದಾರೆ. ಇದರಿಂದ ಇಲಾಖೆಗೆ ಬಂದ ಆದಾಯ ₹6.72 ಕೋಟಿ.
ಆಂಧ್ರಪ್ರದೇಶದ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ರಕ್ತಚಂದನಕ್ಕೆ ಜಾಗತಿ ಮಟ್ಟದಲ್ಲಿ ಭಾರೀ ಬೇಡಿಕೆ ಇದೆ.ಪೀಠೋಪಕರಣ, ಔಷಧ ಉತ್ಪಾದನೆ, ಕರಕುಶಲ ವಸ್ತು ಮತ್ತು ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ರಕ್ತಚಂದನ ಹೆಚ್ಚಾಗಿ ಬಳಕೆಯಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ ಕುಮಾರ್, ‘ಆಂಧಪ್ರದೇಶದ ಅರಣ್ಯಗಳಿಂದ ರಕ್ತಚಂದನ ಹೆಚ್ಚಾಗಿ ಅಕ್ರಮವಾಗಿ ಸಾಗಣೆಯಾಗುತ್ತದೆ. ಮಹಾರಾಷ್ಟ್ರ– ಗೋವಾ ಗಡಿ ಮೂಲಕ ರಾಜ್ಯ ಪ್ರವೇಶಿಸಿದ್ದ ಅಕ್ರಮ ಸಾಗಣೆದಾರರನ್ನು ಬಂಧಿಸಿದ್ದಾಗ ಇದು ಸಿಕ್ಕಿತ್ತು’ ಎಂದು ತಿಳಿಸಿದರು.
‘ವಿದೇಶಿಗರ ಪರವಾಗಿ ಸ್ಥಳೀಯ ಬಿಡ್ದಾರರು ಹರಾಜಿನಲ್ಲಿ ಪಾಲ್ಗೊಂಡಿದ್ದರು. ಅತ್ಯಂತ ಬೇಡಿಕೆಯ ಮರವಾಗಿರುವುದರಿಂದ ಒಳ್ಳೆ ದರಕ್ಕೇ ಮಾರಾಟವಾಗಿದೆ’ ಎಂದರು.
‘ಎ–ಗ್ರೇಡ್ ರಕ್ತಚಂದನ ಪ್ರತಿ ಟನ್ಗೆ ₹33 ಲಕ್ಷದಂತೆ ಮಾರಾಟವಾಗಿದೆ. ಬಿ ಮತ್ತು ಸಿ ಗ್ರೇಡ್ನ ರಕ್ತಚಂದನ ದಿಮ್ಮಿಗಳೂ ಇಲ್ಲಿದ್ದವು. ಆದರೆ ಗುಣಮಟ್ಟದ ರಕ್ತಚಂದನ ಮಾತ್ರ ಹರಾಜಿನಲ್ಲಿ ಮಾರಾಟವಾಗಿದೆ’ ಎಂದು ಮಾಹಿತಿ ನೀಡಿದರು.
**
ರಫ್ತಿಗೆ ಅಗತ್ಯವಿರುವ ಉತ್ಪನ್ನದ ಶುದ್ಧತೆ ಕುರಿತು ಪ್ರಮಾಣ ಪತ್ರಗಳನ್ನು ನೀಡಲಾಗಿದೆ. ಖರೀದಿ ಮಾಡಿದವರು ಅರಣ್ಯ ಇಲಾಖೆಗೆ ಹಣ ಪಾವತಿಸಿ ಕೊಂಡೊಯ್ಯಬೇಕಿದೆ.