ನವದೆಹಲಿ: ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಅತಂತ್ರ ಸ್ಥಿತಿ ಉಂಟಾಗುವ ಸಂಭವ ಇದೆ ಎಂದು ಇಂಡಿಯಾ ಟುಡೆ–ಕಾರ್ವಿ ಇನ್ಸೈಟ್ಸ್ ನಡೆಸಿರುವ ಜನಮತ ಸಮೀಕ್ಷೆ ತಿಳಿಸಿದೆ.
ಕಾಂಗ್ರೆಸ್ಗೆ ಮತ್ತೊಂದು ಅವಧಿಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದು ಶೇ 45ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಅತಂತ್ರ ಸ್ಥಿತಿ ಉಂಟಾದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ಜೆಡಿಎಸ್–ಬಿಎಸ್ಪಿ ಮೈತ್ರಿಕೂಟ ಬೆಂಬಲ ನೀಡಬೇಕು ಎಂದು ಶೇ 39ರಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಜೆಪಿ ಎರಡನೇ ಅತಿದೊಡ್ಡ ಪಕ್ಷವಾಗಲಿದೆ. ಯಾವುದೇ ಪಕ್ಷಕ್ಕೂ ಸರಳ ಬಹುಮತ ದೊರೆಯುವುದಿಲ್ಲ. ಹಾಗಾಗಿ ಸರ್ಕಾರ ರಚನೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಬಹುದು ಎಂದು ಸಮೀಕ್ಷೆ ಹೇಳಿದೆ.
ಕಾಂಗ್ರೆಸ್ ಶೇ 37ರಷ್ಟು, ಬಿಜೆಪಿ ಶೇ 35ರಷ್ಟು ಹಾಗೂ ಜೆಡಿಎಸ್ ಶೇ 19ರಷ್ಟು ಮತ ಗಳಿಸಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.