ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಧ್ರಾಕ್ಕಿದೆ ಹೋರಾಟದ ನಂಟು

Last Updated 1 ಅಕ್ಟೋಬರ್ 2019, 12:44 IST
ಅಕ್ಷರ ಗಾತ್ರ

‘ಗೋಧ್ರಾ’ ಟೈಟಲ್‌ ಅಷ್ಟೇ ಅಲ್ಲ, ‘ಇದು ಎಂದೂ ಮುಗಿಯದ ಯುದ್ಧ’ ಸಬ್‌ ಟೈಟಲ್‌ನಿಂದಲೂ ಸಿನಿ ರಸಿಕರಕುತೂಹಲ ಹೆಚ್ಚಿಸಿರುವ ಚಿತ್ರ. ‘ಗೋಧ್ರಾ’ ಎಂದಾಕ್ಷಣ ಎಲ್ಲರಿಗೂ ಗುಜರಾತ್‌ ಹತ್ಯಾಕಾಂಡ ನೆನಪಾಗಬಹುದು. ಆದರೆ, ಆ ದುರಂತಕ್ಕೂ ಈ ಚಿತ್ರದ ಕಥೆಗೂ ಯಾವುದೇ ನಂಟು ಇಲ್ಲವೆಂದು ಚಿತ್ರತಂಡ ಈ ಹಿಂದೆಯೇ ಸ್ಪಷ್ಟಪಡಿಸಿದೆ. ಇದು ಸದ್ಯದ ಸಾಮಾಜಿಕ ವ್ಯವಸ್ಥೆಯಲ್ಲಿ ನೊಂದು ಬೆಂದವರ ಕಥೆ. ಸಾಮಾನ್ಯ ವ್ಯಕ್ತಿಯೊಬ್ಬ ಶೋಷಣೆ ವಿರುದ್ಧ ಬಂಡೆದ್ದು ಹೋರಾಟಗಾರನಾದ ಕಥೆಯನ್ನು ಹೇಳಲಿದೆಯಂತೆ.

ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಾಯಕ ನಟ ನೀನಾಸಂ ಸತೀಶ್‌ ಅವರದ್ದು ಈ ಚಿತ್ರದಲ್ಲಿ ಕ್ರಾಂತಿಕಾರಿ ಸುಭಾಷ್‌ಪಾತ್ರ. ಚಿತ್ರರಸಿಕರ ಕುತೂಹಲ ಇಮ್ಮಡಿಗೊಳಿಸುವಂತೇ ಚಿತ್ರದ ಪೋಸ್ಟರ್‌ವೊಂದುಈಗ ಸಾಮಾಜಿಕ ಜಾಲತಾಣದಲ್ಲೂಗಮನ ಸೆಳೆಯುತ್ತಿದೆ.

ಜಾಕೋಬ್‌ ಫಿಲಮ್ಸ್‌ ಮತ್ತು ಲೀಡರ್‌ ಫಿಲ್ಮ್‌ ಪ್ರೊಡಕ್ಷನ್‌ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವಚಿತ್ರದ ಬಜೆಟ್‌ ಬಹುಕೋಟಿ ದಾಟಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಆರಂಭವಾಗಿವೆ.ಇದು ಕೂಡ ಪ್ಯಾನ್‌ ಇಂಡಿಯಾ ಸಿನಿಮಾ ಆಗುವ ನಿರೀಕ್ಷೆ ಹುಟ್ಟಿಸಿದೆ. ಬಹುಷಃ ಎಲ್ಲವೂ ಅಂದುಕೊಂಡಂತೆಯೇ ನಡೆದರೆ ‘ಗೋಧ್ರಾ’ವನ್ನು ಡಿಸೆಂಬರ್‌ನಲ್ಲಿ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ.

ಈ ಚಿತ್ರ ಅಕ್ಟೋಬರ್‌ ಅಥವಾ ನೆವೆಂಬರ್‌ನಲ್ಲಿ ತೆರೆಗೆ ಬರಬೇಕಿತ್ತು. ಆದರೆ, ಚಿತ್ರ ಬಿಡುಗಡೆ ಸ್ವಲ್ಪ ವಿಳಂಬವಾಗಬಹುದು ಎನ್ನುವುದನ್ನು ನೀನಾಸಂ ಸತೀಶ್‌ ಟ್ವೀಟರ್‌ನಲ್ಲಿ ಹಾಕಿರುವ ಬರಹವೂ ಪುಷ್ಟೀಕರಿಸಿದೆ.‘ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಚಿತ್ರೀಕರಣ ಮಾಡಬೇಕಾಗಿದ್ದರಿಂದ ಚಿತ್ರದ ಚಿತ್ರೀಕರಣ ಮುಗಿಯಲು ಸ್ವಲ್ಪ ತಡವಾಗಿದೆ. ತಡವಾದರೂ ನೀವೆಲ್ಲರೂ ಅಚ್ಚರಿಪಡುವ ಚಿತ್ರ ಇದಾಗಲಿದೆ’ ಎಂದು ಸತೀಶ್‌ ಟ್ವೀಟ್‌ ಮಾಡಿದ್ದು, ಅಭಿಮಾನಿಗಳು ಮತ್ತು ಸಿನಿ ರಸಿಕರು ಇನ್ನಷ್ಟು ದಿನಗಳು ‘ಗೋಧ್ರಾ’ಗಾಗಿ ಕಾಯಿರಿ ಎನ್ನುವ ಕೋರಿಕೆ ರವಾನಿಸಿದ್ದಾರೆ.

‘ಗೋಧ್ರಾ ಚಿತ್ರದಲ್ಲಿನನ್ನದು ಮಧ್ಯಮ ವರ್ಗದ ವಿದ್ಯಾರ್ಥಿಯ ಪಾತ್ರ. ಆತ ಜನಪರ ಹೋರಾಟ ನಡೆಸುವ ಆ್ಯಕ್ಟಿವಿಸ್ಟ್‌ ಮನಸ್ಥಿತಿಯ ವ್ಯಕ್ತಿ. ಪೊಲಿಟಿಕಲ್ ಥ್ರಿಲ್ಲರ್ ಜತೆಗೆ ಇದರಲ್ಲೊಂದು ಪ್ರೇಮಕಥೆಯೂ ಇದೆ’ ಎನ್ನುವ ಮಾಹಿತಿಯನ್ನು ಸತೀಶ್‌ ಈ ಹಿಂದೆಯೇ ನೀಡಿದ್ದರು.

ಇದು ನಕ್ಸಲ್‌ ನಾಯಕ ದಿವಂಗತ ಸಾಕೇತ್‌ ರಾಜನ್‌ ಬದುಕಿನ ಕಥೆ ಆಧರಿಸಿದ ಚಿತ್ರವೇ? ಎಂದು ಕೇಳಿದರೆ, ನೇರ ಉತ್ತರ ನೀಡಲು ನಿರಾಕರಿಸುವ ಸತೀಶ್‌, ಛತ್ತೀಸಗಡ, ಕೇರಳ, ಆಂಧ್ರಪ್ರದೇಶ, ಹಾಸನ, ಕುಕ್ಕೆಸುಬ್ರಹ್ಮಣ್ಯ, ಚಿಕ್ಕಮಗಳೂರು ಹಾಗೂ ಭಟ್ಕಳದಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರೀಕರಣದ ಸ್ಥಳಗಳಿಗೂ ಹಾಗೂ ಆ ಭಾಗದಲ್ಲಿರುವ ಸಾಮಾಜಿಕ ಸಮಸ್ಯೆಗಳಿಗೂ ನೇರ ಸಂಬಂಧವಿಲ್ಲ. ಶೋಷಣೆಗೆ ತುತ್ತಾದ ಯಾವುದೇ ವ್ಯಕ್ತಿ ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದು ಹೋರಾಟಗಾರನಾಗಬಹುದು. ಆ ಪಾತ್ರದ ಮುಖದಲ್ಲಿ ಯಾವುದೇ ಹೋರಾಟಗಾರನ ಪ್ರತಿಬಿಂಬ ಕಾಣಿಸಬಹುದು ಎನ್ನುವ ಮಾತು ಸೇರಿಸುತ್ತಾರೆ.

ಚಿತ್ರದಲ್ಲಿರುವ ಪ್ರಮುಖ ನಾಲ್ಕು ಪಾತ್ರಗಳಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಾಗಿ ಸತೀಶ್‌ ಮತ್ತು ಶ್ರದ್ಧಾ ಶ್ರೀನಾಥ್‌, ರಾಜಕಾರಣಿಯ ಪಾತ್ರದಲ್ಲಿ ಅಚ್ಯುತ್‌ ಕುಮಾರ್‌ ಹಾಗೂ ಪೈಲಟ್‌ ಪಾತ್ರದಲ್ಲಿ ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ.

ಚಿತ್ರದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಕೆ.ಎಸ್‌.ನಂದೀಶ್‌ ಅವರದ್ದು.ಜಬೇಜ್‌ ಕೆ.ಗಣೇಶ್‌ ಛಾಯಾಗ್ರಹಣ ಮಾಡಿದ್ದಾರೆ.

ಸತೀಶ್‌ ಮತ್ತು ಅದಿತಿ ಪ್ರಭುದೇವ ನಟಿಸಿರುವ ‘ಬ್ರಹ್ಮಚಾರಿ’ ಚಿತ್ರವು ಪೂರ್ಣಗೊಂಡಿದ್ದು, ಅದು ಕೂಡ ಸದ್ಯದಲ್ಲೇ ತೆರೆಕಾಣಲಿದೆ. ಈ ಚಿತ್ರದ ಟೀಸರ್‌ ಅನ್ನು ಟ್ವಿಟರ್‌ನಲ್ಲಿ ಸತೀಶ್‌ ಹಂಚಿಕೊಂಡಿದ್ದಾರೆ. ‘ಸಿನಿಮಾವನ್ನು ಯಾವಾಗ ಬಿಡುಗಡೆ ಮಾಡೋಣ ನೀವೆ ಹೇಳಿ’ ಎಂದು ಕೇಳಿಕೊಂಡಿದ್ದ ಅವರು, ತೀರ್ಮಾನವನ್ನು ಅಭಿಮಾನಿಗಳಿಗೇ ಬಿಟ್ಟಿದ್ದರು. ಕೊನೆಗೂ ‘ಬ್ರಹ್ಮಾಚಾರಿ’ಗೆ ನವೆಂಬರ್‌ನಲ್ಲಿ ತೆರೆಕಾಣಲು ಕಂಕಣ ಕೂಡಿಬಂದಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT