ಬೆಂಗಳೂರು: ಹೊರ ದೇಶಗಳಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನುಕಸ್ಟಮ್ಸ್ ಅಧಿಕಾರಿಗಳು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಬಂಧಿಸಿ ₹ 74.46 ಲಕ್ಷ ಮೌಲ್ಯದ 1875.75 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.
ಬಂಧಿತರಲ್ಲಿ ಮೈಸೂರಿನ ಇಬ್ಬರೂ ಸೇರಿದ್ದಾರೆ. ವೈಮಾನಿಕ ಜಾಗೃತ ದಳದ ಸುಳಿವಿನ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. 1ರಂದು ಬ್ಯಾಂಕಾಕ್ನಿಂದ ವಿಮಾನದಲ್ಲಿ ಬಂದ ಆರೋಪಿಗಳು ₹30 ಲಕ್ಷ ಮೌಲ್ಯದ 751.38 ಗ್ರಾಂ ಚಿನ್ನ ಸಾಗಣೆ ಮಾಡುತ್ತಿದ್ದರು.
ಆರೋಪಿಗಳು ಚಿನ್ನವನ್ನು ರಾಡು ಮತ್ತು ಅರ್ಧ ಚಂದ್ರಾಕಾರದ ಮಾದರಿಯಲ್ಲಿ ಮಾರ್ಪಡಿಸಿ, ಬೆಳ್ಳಿ ಬಣ್ಣ ಲೇಪನ ಮಾಡಿ ಬ್ಯಾಗಿನಲ್ಲಿ ಸಾಗಣೆ ಮಾಡುತ್ತಿದ್ದರು ಎಂದು ಕಸ್ಟಮ್ಸ್ ಪ್ರಕಟಣೆ ತಿಳಿಸಿದೆ.
ಮಸ್ಕತ್ನಿಂದ 2ರಂದು ಕೆಐಎಗೆ ಬಂದಿಳಿದ ಮಹಾರಾಷ್ಟ್ರದ ಥಾಣೆಯ ಇಬ್ಬರು ಆರೋಪಿಗಳು ಚಿನ್ನವನ್ನು ಪೇಸ್ಟ್ ಮಾದರಿಯಲ್ಲಿ ಕರಗಿಸಿ ಗುದದ್ವಾರದಲ್ಲಿ ಮುಚ್ಚಿಟ್ಟುಕೊಂಡು ತರುತ್ತಿದ್ದರು. ಅವರಿಂದ ₹44.47 ಲಕ್ಷದ 1124.37 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಮತ್ತಿಬ್ಬರು ಅಂತರರಾಷ್ಟ್ರೀಯ ಕಳ್ಳಸಾಗಣೆದಾರರು ಭಾಗಿಯಾಗಿದ್ದು ಅವರುಶೌಚ ಗೃಹದಲ್ಲಿ ಬಚ್ಚಿಟ್ಟಿದ್ದ ಚಿನ್ನವನ್ನು ಬಂಧಿತರು ಸಾಗಿಸುತ್ತಿದ್ದರು. ಆರೋಪಿಗಳನ್ನು ಸಂಪೂರ್ಣವಾಗಿ ಪರಿಶೀಲನೆಗೆ ಒಳಪಡಿಸಿದಾಗ ಪ್ರಕರಣ ಬಯಲಿಗೆ ಬಂದಿದೆ.