ಹರಪನಹಳ್ಳಿ: ಜೈನ ಧರ್ಮದ ಸನ್ಯಾಸ ದೀಕ್ಷೆ ಸ್ವೀಕರಿಸಲಿರುವ ಪಟ್ಟಣದ ಬಿ.ಬಿ.ಎಂ ಪದವೀಧರೆ ಪೂಜಾ ಕುಮಾರಿ ಅವರ ಮೆರವಣಿಗೆ ಪಟ್ಟಣದಲ್ಲಿ ಶುಕ್ರವಾರ ವಿವಿಧ ವಾದ್ಯಮೇಳಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ತೆಗ್ಗಿನಮಠ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಎಡಿಬಿ ಕಾಲೇಜಿನ ಸಭಾಂಗಣ ತಲುಪಿತು. ಅಲಂಕೃತಗೊಂಡಿದ್ದ ತೆರೆದ ವಾಹನದಲ್ಲಿ ಪೂಜಾ ಕುಮಾರಿ ಅವರನ್ನು ಕೂರಿಸಿ ಮೆರವಣಿಗೆ ಮಾಡಲಾಯಿತು.
ಜೈನ ಧರ್ಮದ ತ್ಯಾಗದ ಸಂಕೇತ, ಪವಿತ್ರ ಕಾರ್ಯವಾದ ದಾನವನ್ನು ಮಾಡಲಾಯಿತು. ಮೆರವಣಿಗೆ ಸಂದರ್ಭದಲ್ಲಿ ಬಟ್ಟೆ, ಧಾನ್ಯ, ಹಣ್ಣು–ಹಂಪಲು, ಹಣವನ್ನು ಪೂಜಾ ಕುಮಾರಿ ಜನರಿಗೆ ನೀಡುತ್ತ ಸಾಗಿದರು. ದಾನದ ವಸ್ತುಗಳನ್ನು ಪಡೆಯಲು ಜನ ಮುಗಿ ಬೀಳುತ್ತಿರುವ ದೃಶ್ಯ ಕಂಡುಬಂತು.
ಪೂಜಾ ಕುಮಾರಿ ತಂದೆ ಗಣಪತರಾಜ ಜೈನ್, ತಾಯಿ ಕಂಕುಬೇನ್ ಹಾಗೂ ಕುಟುಂಬದವರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಯಿತು. ಏಪ್ರಿಲ್ 28ರಂದು ಎಸ್.ಎಸ್.ಎಚ್.ಜೈನ್ ಕಾಲೇಜು ಆವರಣದಲ್ಲಿ ಅಭಯಚಂದ್ರ ಸುರಿಶ್ವರಜಿ ಮಹಾರಾಜ್ ಹಾಗೂ ವಿಜಯ ಹಿರಾಚಂದ್ರ ಸುರಿಶ್ವರಜಿ ಮತ್ತು ಶ್ರದ್ಧಾಂಗ ಪ್ರಿಯ ಶ್ರೀಜಿ ಹಾಗೂ ಕರುಣಾಂಗ ಪ್ರಿಯಶ್ರೀಜಿ ಸಮ್ಮುಖದಲ್ಲಿ ಸನ್ಯಾಸ ದೀಕ್ಷೆ ಕಾರ್ಯಕ್ರಮ ನಡೆಯಲಿದೆ.
ಶ್ವೇತಾಂಬರ ಜೈನ್ ಸಮಾಜದ ಮುಖಂಡರಾದ ಧನರಾಜ ಜೈನ್, ಸುಮೀರಲಾಲ್ ಜೈನ್, ವಿಜಯಕುಮಾರ್, ಮಹಾವೀರಕುಮಾರ್, ಗೌತಮಚಂದ್, ಅಶೋಕಕುಮಾರ್, ಕಾಂತಿಲಾಲ್, ಉತ್ತಮಚಂದ ಜೈನ್, ಶ್ರೀಪಾಲ್ ಇದ್ದರು.
ದಾವಣಗೆರೆ, ಹೂವಿನಹಡಗಲಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹರಿಹರ, ಜಗಳೂರು ಹಾಗೂ ಸುತ್ತಮುತ್ತಲಿನ ಜೈನ ಸಮಾಜದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.