ಸರ್ಕಾರದ ವಿರುದ್ಧವೇ ಚುನಾವಣಾ ಆಯೋಗ ಅರ್ಜಿ ಸಲ್ಲಿಸಿರುವ ಬಗ್ಗೆ ನ್ಯಾಯಪೀಠ ಅಚ್ಚರಿ ಹಾಗೂ ಬೇಸರ ವ್ಯಕ್ತಪಡಿಸಿತು. ‘ಇದೊಂದು ಗಂಭೀರ ವಿಚಾರ. ಪ್ರಕರಣದ ಕುರಿತು ಸರ್ಕಾರಿ ವಕೀಲರು ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ಮಾಹಿತಿ ಪಡೆದು ಗುರುವಾರವೇ (ಫೆ.8) ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ನಿರ್ದೇಶಿಸಿದೆ.
‘ರಾಜ್ಯದ ವಿವಿಧ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಚುನಾವಣೆ ನಡೆಸಲು ಅನುವಾಗುವಂತೆ ರಾಜ್ಯ ಸರ್ಕಾರ ವಾರ್ಡ್ ಮರು ವಿಂಗಡಣೆ ಮಾಡಿ ಮತ್ತು ಮೀಸಲು ಕಲ್ಪಿಸಿದ ಪಟ್ಟಿಯನ್ನು ಆಯೋಗಕ್ಕೆ ನೀಡಬೇಕಿದೆ. ಆದರೆ, ಈ ಪಟ್ಟಿಯನ್ನು ಆಯೋಗಕ್ಕೆ ನೀಡಲು ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ’ ಎಂದು ಆಯೋಗವು ಆರೋಪಿಸಿದೆ.
‘ಈಗಾಗಲೇ 215 ಕ್ಷೇತ್ರಗಳಿಗೆ ಮೀಸಲು ಪಟ್ಟಿ ನೀಡಲಾಗಿದೆ. ಉಳಿದ 3 ಕ್ಷೇತ್ರಗಳ ಮೀಸಲು ಪಟ್ಟಿ ನೀಡಬೇಕು ಹಾಗೂ 18 ಕ್ಷೇತ್ರಗಳ ವಾರ್ಡ್ ಮರು ವಿಂಗಡಣೆ ಪಟ್ಟಿ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂಬುದು ಆಯೋಗ ಕೋರಿಕೆ.