ಹೆಬ್ರಿ: ಸರ್ಕಾರಿ ಪ್ರಾಯೋಜಿತ ‘ಸಪ್ತಪದಿ’ ವಿವಾಹ ಸಮಾರಂಭದಲ್ಲಿ ಮದುವೆಯಾಗಲು ಅರ್ಜಿಸಲ್ಲಿಸಿ ಕಾದಿದ್ದ ಪಡುಕುಡೂರಿನ ಯುವಜೋಡಿ, ಕೋವಿಡ್ ನಿರ್ಬಂಧದ ಕಾರಣದಿಂದ ಅತಂತ್ರ ಸ್ಥಿತಿಯಲ್ಲಿರುವ ಸರ್ಕಾರಿ ಕಾರ್ಯಕ್ರಮದ ನಿರೀಕ್ಷೆ ಕೈಬಿಟ್ಟು, ಸಮೀಪದ ಶಿವಪುರದಲ್ಲಿ ಸರಳ ರೀತಿಯಲ್ಲಿ ವಿವಾಹವಾದರು.
ಬುಧವಾರ ಹೆಬ್ರಿ ತಾಲ್ಲೂಕು ವರಂಗ ಗ್ರಾಮ ಪಂಚಾಯಿತಿಯ ಪಡುಕುಡೂರು ಚಂದ್ರಶೇಖರ ಪೂಜಾರಿ ಹಾಗೂ ಪುಪ್ಪಲತಾ ಸರ್ಕಾರಿ ‘ಸಪ್ತಪದಿ ’ಗೆ ಕಾಯದೆ ಬುಧವಾರ ಶಿವಪುರದ ವಧುವಿನ ಮನೆಯಲ್ಲಿ ವಿವಾಹವಾದರು.
‘ಸರ್ಕಾರದ ನೆರವಿನ ಸಪ್ತಪದಿ ವಿವಾಹ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿ ಕಾಯುತ್ತಿದ್ದೆವು. ಆದರೆ ಆ ಬಗ್ಗೆ ಈಗ ಏನೂ ಮಾಹಿತಿ ಇಲ್ಲ. ಹೀಗಾಗಿ, ಹೆಚ್ಚು ದಿನ ಕಾಯದೆ ಸರಳವಾಗಿ ಮದುವೆ ಆದೆವು’ ಎಂದು ಚಂದ್ರಶೇಖರ ಪ್ರತಿಕ್ರಿಯಿಸಿದ್ದಾರೆ.
ಚಂದ್ರಶೇಖರ ಅವರು ತಿಮ್ಮೊಟ್ಟು ಭೋಜ ಪೂಜಾರಿ ವಿಮಲ ಪೂಜಾರಿ ಅವರ ಪುತ್ರ, ಪುಷ್ಪಲತಾ ಅವರು ಶಿವಪುರ ದೇವಸ್ಥಾನಬೆಟ್ಟು ಬಾಬು ಪೂಜಾರಿ ಹಾಗೂ ಯಮುನಾ ಪೂಜಾರಿ ಅವರ ಪುತ್ರಿ. ಸರ್ಕಾರದ ಕೋವಿಡ್ ಲಾಕ್ಡೌನ್ ನಿರ್ಬಂಧದ ನಿಯಮಗಳನ್ನು ಪಾಲಿಸಿಯೇ ಮನೆಯಲ್ಲಿ ಮದುವೆ ನಡೆಯಿತು. ಎರಡೂ ಕಡೆಯಿಂದ ಕೇವಲ 30 ಮಂದಿಯಷ್ಟೇ ಭಾಗವಹಿಸಿದ್ದರು. ಶಿವಪುರದ ರಂಗನಾಥ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.