‘ಸರ್ಕಾರಿ ಶಿಕ್ಷಕರಿಗೆ ಮೂರು ತಿಂಗಳಿಂದ ಸಂಬಳವಿಲ್ಲ’

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಭವಿಷ್ಯ ರೂಪಿಸಲು ಶ್ರಮಿಸುತ್ತಿರುವ ಸುಮಾರು ಎಂಟು ಸಾವಿರ ಶಿಕ್ಷಕರಿಗೆ ಮೂರು ತಿಂಗಳಿನಿಂದ ಸಂಬಳ ಆಗಿಲ್ಲ. ವೇತನಕ್ಕಾಗಿ ಸರ್ಕಾರಿ ಕಚೇರಿಗಳನ್ನು ಅಲೆಯುವ ದುಸ್ಥಿತಿ ಶಿಕ್ಷಕರಿಗೆ ಒದಗಿ ಬಂದಿದೆ.
ಕೇಂದ್ರ ಸರ್ಕಾರದ ಅನುದಾನದಲ್ಲಿ ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಗಳು ರಾಜ್ಯದಲ್ಲೂ ಜಾರಿಯಲ್ಲಿವೆ. ಈ ಯೋಜನೆಯಡಿ ವೇತನ ಪಡೆಯುವ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರಿಗೆ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನ ವೇತನ ಬಂದಿಲ್ಲ.
ಆರನೇ ವೇತನ ಆಯೋಗದ ಅನ್ವಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತಿಂಗಳಿಗೆ ಸರಾಸರಿ ₹ 30 ಸಾವಿರ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ₹ 40 ಸಾವಿರ ಸಂಬಳ ಬರುತ್ತದೆ. ಆಯಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ಕಾರ್ಯನಿರ್ವಹಣಾ ಅಧಿಕಾರಿಗಳ ಮೂಲಕ ವೇತನವನ್ನು ಶಿಕ್ಷಕರ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.
‘ನನ್ನೂರು ಬಿಜಾಪುರ. ಬಂಟ್ವಾಳ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಶಿಕ್ಷಕನಾಗಿದ್ದು, ಬಾಡಿಗೆ ಮನೆ ಮಾಡಿಕೊಂಡಿದ್ದೇನೆ. ಮೂರು ತಿಂಗಳಿನಿಂದ ಪಗಾರ ಇಲ್ಲದಿರುವುದರಿಂದ ಕಷ್ಟವಾಗಿದೆ’ ಎಂದು ಶಿಕ್ಷಕರೊಬ್ಬರು ಕಷ್ಟ ಹೇಳಿಕೊಂಡರು.
‘ತಿಂಗಳ ಒಳಗೆ ಸಂಬಳ ಸಿಗಲಿದೆ’: ‘ವರ್ಗಾವಣೆ ಬಳಿಕ ರಾಜ್ಯದ ಕೆಲವು ತಾಲ್ಲೂಕುಗಳಲ್ಲಿನ ಶಿಕ್ಷಕರ ಸಂಖ್ಯೆಯಲ್ಲಿ ಏರಿಳಿತವಾಯಿತು. ಇದರಿಂದ ಆಯಾ ತಾಲ್ಲೂಕುಗಳಿಗೆ ಈ ಮುಂಚಿನ ಅಂಕಿ–ಅಂಶದಂತೆ ಹಂಚಿಕೆ ಮಾಡಿದ ಅನುದಾನ ದಿಂದ ಸಂಬಳ ನೀಡಲು ಆಗಲಿಲ್ಲ. ಈಗ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿನ ಶಿಕ್ಷಕರ ಸಂಖ್ಯೆಯ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದೇವೆ. ತಿಂಗಳ ಒಳಗೆ ಎಲ್ಲ ಶಿಕ್ಷಕರಿಗೆ ಸಂಬಳ ವಿಲೇವಾರಿಯಾಗಲಿದೆ’ ಎಂದು ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾಧಿಕಾರಿ ಎಂ.ಟಿ. ರೇಜು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.