ಬೆಂಗಳೂರು: ‘ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂದು ನಮ್ಮ ಪಕ್ಷದ ಸಂಸದರು(ಅನಂತಕುಮಾರ ಹೆಗಡೆ) ಹೇಳಿಲ್ಲ. ವಿದ್ಯಾರ್ಥಿಗಳ ಜತೆ ಸಂವಾದ ನಡೆಸುವ ಅವರು ಆಡಿದ ಮಾತೊಂದು ಈ ರೀತಿಯ ಪ್ರಮಾದಕ್ಕೆ ಕಾರಣವಾಗಿದೆ’ ಎಂದು ಸಮಾಜ ಕಲ್ಯಾಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
‘ನಿಮ್ಮ ಪಕ್ಷದ ಸಂಸದರೊಬ್ಬರು ಸಂವಿಧಾನ ಬದಲಾವಣೆ ಮಾಡಲು ಬಂದಿದ್ದೇವೆ ಎಂದು ಹೇಳಿದ್ದಾರೆ’ ಎಂದು ಕಾಂಗ್ರೆಸ್ನ ನಾರಾಯಣಸ್ವಾಮಿಪ್ರಸ್ತಾಪಿಸಿದರು. ‘ಅವರ ಹೆಸರು ಹೇಳಿ’ ಎಂದು ಜೆಡಿಎಸ್ನ ಬಸವರಾಜ ಹೊರಟ್ಟಿ ಸಲಹೆ ನೀಡಿದರು.
ಆಗ ಅನಂತಕುಮಾರ ಹೆಗಡೆ ಹೆಸರು ಪ್ರಸ್ತಾಪವಾಯಿತು. ಈ ಸದನದ ಸದಸ್ಯರಲ್ಲರದವರ ಹೆಸರು ಹೇಳುವಂತಿಲ್ಲ ಎಂದು ಬಿಜೆಪಿ ಸದಸ್ಯರು ತಕರಾರು ತೆಗೆದರು.
‘ಸಂವಿಧಾನ ಬದಲಾವಣೆ ಮಾಡಿ ಎಂದವರ ಹೆಸರು ಹೇಳಿದರೆ ತಪ್ಪೇನು? ಚರ್ಚೆ ಆಗಲಿ ಬಿಡಿ’ ಎಂದು ಹೊರಟ್ಟಿ ಹೇಳಿದರು. ಸಮಜಾಯಿಷಿ ನೀಡಿದ ಕಾರಜೋಳ, ಹೆಗಡೆ ಹೇಳಿದ್ದು ಆ ಅರ್ಥದಲ್ಲಿ ಅಲ್ಲ ಎಂದರು. ‘ಚರ್ಚೆಯನ್ನು ಇಲ್ಲಿಗೆ ನಿಲ್ಲಿಸಿ’ ಎಂದು ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಮಾತಿಗೆ ತಡೆ ಹಾಕಿದರು.