ರಾಮನಗರ: ಇ.ಡಿ. ಮತ್ತು ಐ.ಟಿ. ಅಧಿಕಾರಿಗಳು ಸಂವಿಧಾನಾತ್ಮಕವಾಗಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಬಿಜೆಪಿಯ ಪಾತ್ರವೇನು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರಶ್ನಿಸಿದರು.
ನಗರದಲ್ಲಿ ಮಂಗಳವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಬೇರೆಯವರ ಕಷ್ಟ ನೋಡಿ ಸಂತೋಷ ಪಡುವ ಮನುಷ್ಯ ನಾನಲ್ಲ. ಅದರೆ ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರುತ್ತದೆ ಎಂದರು.
'ಡಿ.ಕೆ. ಶಿವಕುಮಾರ್ಗೆ ಅಮಿತ್ ಶಾ ಕರೆ ಮಾಡಿದ್ದರು ಎನ್ನುವುದು ಸುಳ್ಳು. ಕೆಲವರು ಸಾಂದರ್ಭಿಕವಾಗಿ ಮಾತನಾಡುತ್ತಾರೆ. ಅಂತಹ ಹೇಳಿಕೆಗಳಿಗೆ ಮಹತ್ವ ಕೊಡುವ ಅಗತ್ಯ ಇಲ್ಲ' ಎಂದು ಪ್ರತಿಕ್ರಿಯಿಸಿದರು.
'ಬಿಜೆಪಿಯವರು ಡಿಕೆಶಿ ಬಳಿ ಹಣ ಇಟ್ಟಿದ್ದರು ಎನ್ನುವುದು ಸುಳ್ಳು. ಈ ಬಗ್ಗೆ ಸಾಕ್ಷ್ಯ ಕೊಡಲಿ. ಅಗತ್ಯ ಇದ್ದರೆ ತನಿಖೆಯೂ ಆಗಲಿ' ಎಂದರು.
ವಾರ್ಡನ್ ಅಮಾನತು: ರಾಮನಗರ ತಾಲ್ಲೂಕಿನ ಕೈಲಾಂಚ ಗ್ರಾಮದ ಡಾ. ಅಂಬೇಡ್ಕರ್ ವಸತಿ ನಿಲಯದ ಮಕ್ಕಳಿಗೆ ಕಜ್ಜಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ಆರೋಪದ ಮೇಲೆ ವಾರ್ಡನ್ ರನ್ನು ಅಮಾನತು ಮಾಡಲು ಅವರು ಆದೇಶ ನೀಡಿದರು.