ಕಲಬುರ್ಗಿ:ಜಿಲ್ಲೆಯ ಸೇಡಂ ತಾಲೂಕಿನ ಯಾನಗುಂದಿಯ ಮಾತೆ ಮಾಣಿಕೇಶ್ವರಿ ಅವರು, ಲಿಂಗಕ್ಯರಾಗಿದ್ದು, ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
‘ಮಾತೆ ಮಾಣಿಕ್ಯೇಶ್ವರಿ ಅವರು ನಡೆದಾಡುವ ದೇವರೆಂದೇ ಖ್ಯಾತಿಯಾಗಿದ್ದರು. ಮಹಾಯೋಗಿನಿ ಎಂದು ಹೆಸರುವಾಸಿಯಾಗಿದ್ದರು. ಕರ್ನಾಟಕ, ಆಂಧ್ರಪ್ರದೇಶ,ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಅಪಾರ ಸಂಖ್ಯೆಯ ಭಕ್ತ ಸಮೂಹವನ್ನು ಹೊಂದಿದ್ದಾರೆ. ಪ್ರತಿ ಶಿವರಾತ್ರಿಯಂದು ವಿಶೇಷ ಸಂದೇಶ ನೀಡುತ್ತಿದ್ದರು.
ಸಮಾಜದ ಏಳಿಗಾಗಿ, ಭಕ್ತರ ಸಂಕಷ್ಟಗಳ ನಿವಾರಣೆಗಾಗಿ ಅಪಾರವಾಗಿ ಶ್ರಮಿಸುತ್ತಿದ್ದರು. ಆಧ್ಯಾತ್ಮ, ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆಯಿಂದ ಈ ನಾಲ್ಕು ರಾಜ್ಯಗಳಲ್ಲಿ ಲಕ್ಷಾಂತರ ಭಕ್ತ ಸಮೂಹವು ದುಃಖದ ಮಡುವಿನಲ್ಲಿದ್ದು, ತುಂಬಲಾರದ ನಷ್ಟ ಉಂಟಾಗಿದೆ.
ನಾಲ್ಕೂ ರಾಜ್ಯಗಳ ಭಕ್ತ ಸಮೂಹಕ್ಕೆ, ಅನುಯಾಯಿಗಳಿಗೆ ಮಾತೆಯವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತಲ್ಲಿ ಪ್ರಾರ್ಥಿಸುವುದಾಗಿ ಡಿಸಿಎಂ ತಮ್ಮ ಶೋಕ ಸಂದೇಶದಲ್ಲಿ’ ತಿಳಿಸಿದ್ದಾರೆ.