ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟಿಯು: ಸಾಧನೆಗಿಂತ, ಅವಾಂತರದ ‘ಸದ್ದೇ’ ಜಾಸ್ತಿ

Last Updated 12 ಜನವರಿ 2019, 20:18 IST
ಅಕ್ಷರ ಗಾತ್ರ

ಬೆಳಗಾವಿ: ಪ್ರಶ್ನೆ ಪತ್ರಿಕೆ ಸೋರಿಕೆ, ಫಲಿತಾಂಶ ಪ್ರಕಟಿಸುವಲ್ಲಿ ವಿಳಂಬ, ಅಂಕಪಟ್ಟಿಗಳಲ್ಲಿ ಗೊಂದಲ, ಪಠ್ಯಕ್ರಮಗಳ ಸತತ ಬದಲಾವಣೆ, ಅನುದಾನ ಕೊರತೆ, ಅವ್ಯವಹಾರ, ನೇಮಕಾತಿಯಲ್ಲಿ ಅಕ್ರಮ... ಹೀಗೆ ನಾನಾ ಕಾರಣಗಳಿಂದ ಸುದ್ದಿಯಾಗುತ್ತಿದೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ. ಸಾಧನೆ ಗಳ ವಿಷಯಗಳಿಗಿಂತ ಅವಾಂತರಗಳಿಂದಾಗಿಯೇ ಸುದ್ದಿಯಾಗಿದ್ದು ಹೆಚ್ಚು.

ಬೆಳಗಾವಿಯನ್ನು ಕೇಂದ್ರ ಸ್ಥಾನವನ್ನಾಗಿ ಹೊಂದಿರುವ, 20ರ ಹರೆಯದ ವಿಟಿಯುಗೂ ಅನುದಾನದ ಕೊರತೆ ಕಾಡುತ್ತಿದೆ.

ಪ್ರಯೋಗಾಲಯಗಳಿಗೆ ಕಂಪ್ಯೂಟರ್‌ಗಳು ಮೊದಲಾದ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕುಲಸಚಿವ ಪ್ರೊ.ಎಚ್‌.ಎನ್‌. ಜಗನ್ನಾಥರೆಡ್ಡಿ ಸೆ.12ರಂದು, ಹಿಂದಿನ ಕುಲಪತಿ ಪ್ರೊ.ಎಚ್‌. ಮಹೇಶಪ್ಪ, ಕುಲಸಚಿವರಾಗಿದ್ದ ಕೆ.ವಿ. ಪ್ರಕಾಶ್‌, ಸ್ಥಾನಿಕ ಎಂಜಿನಿಯರ್ (ರೆಸಿಡೆಂಟ್ ಎಂಜಿನಿಯರ್) ಬಿ.ಸಿ. ಶಾಂತಪ್ಪ ಹಾಗೂ ಯೋಗಾನಂದ್‌ ವಿರುದ್ಧ ದೂರು ನೀಡಿದ್ದರು. ಇದನ್ನು ಆಧರಿಸಿ ಯೋಗಾನಂದ್‌ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

ಉಉ‍ಪಕರಣಗಳ ಅಳವಡಿಕೆಗೂ ಮುನ್ನವೇ ಹಣ ನೀಡಲಾಗಿದೆ. ಇದರಿಂದ ₹6.80 ಕೋಟಿ ನಷ್ಟವಾಗಿದೆ ಎನ್ನುವ ಅಂಶವನ್ನು ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಕೇಶವನಾರಾಯಣ ನೇತೃತ್ವದ ತನಿಖಾ ಸಮಿತಿಯ ವರದಿ ಉಲ್ಲೇಖಿಸಿದೆ. ಬೋಧಕ– ಬೋಧಕೇತರ ಸಿಬ್ಬಂದಿ ನೇಮಕಾತಿ ಹಗರಣ ಹಾಗೂ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಎರಡೂವರೆ ವರ್ಷಗಳ ಹಿಂದೆಯೇ ಸಮಿತಿ ವರದಿ ನೀಡಿದೆ. ವರದಿ ಆಧರಿಸಿ 2016ರ ಮಾರ್ಚ್‌ನಲ್ಲಿ ರಾಜ್ಯಪಾಲರು ಪ್ರೊ.ಎಚ್‌. ಮಹೇಶಪ್ಪ ಅವರನ್ನು ಅಮಾನತು ಮಾಡಿದ್ದರು.

‘ಸಣ್ಣ ಪುಟ್ಟ ಲೋಪಗಳಿವೆ. ಅವುಗಳನ್ನು ಸರಿಪಡಿಸಿಕೊಂಡು ಸುಧಾರಿಸುತ್ತಿದ್ದೇವೆ. 1998ರಿಂದ 2016ರ ಅವಧಿಯಲ್ಲಿ ತೆರಿಗೆ ವಿನಾಯಿತಿ ಸಿಕ್ಕಿಲ್ಲ. ಇದರಿಂದ, ವಿಟಿಯು ವಿವಿಧ ಬ್ಯಾಂಕುಗಳಲ್ಲಿ ಠೇವಣಿ ಇರಿಸಿದ್ದ ₹ 441 ಕೋಟಿಯನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿತ್ತು. ₹127 ಕೋಟಿ ದಂಡ ಪಾವತಿಗೆ ನೋಟಿಸ್‌ ಕೊಟ್ಟಿತ್ತು. ತೆರಿಗೆ ವಿನಾಯಿತಿ ಕೋರಿ ರಾಜ್ಯ ಸರ್ಕಾರದಿಂದ ಸಲ್ಲಿಸಿದ್ದ ಮನವಿಗೆ ಕೇಂದ್ರ ಸ್ಪಂದಿಸಿದೆ. ಮುಟ್ಟುಗೋಲು ಹಾಕಿಕೊಂಡಿದ್ದ ಹಣ ದೊರೆಯಲಿದ್ದು, ಮತ್ತಷ್ಟು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗುವುದು’ ಎಂದು ಕುಲ‍ಪತಿ ಪ್ರೊ.ಕರಿಸಿದ್ದಪ್ಪ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT