ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಹತ್ಯೆ: ‘ವೆಚ್ಚ’ಕ್ಕೆ ಕುಂಟಿದ ತನಿಖೆ!

ಖರ್ಚಾಗಿದ್ದು ₹98 ಲಕ್ಷ: ಕೊಟ್ಟಿದ್ದು ₹14 ಲಕ್ಷ : ಎಸ್‌ಐಟಿ ಕಳುಹಿಸಿದ ಬಿಲ್‌ಗಳು ವಾಪಸ್
Last Updated 10 ನವೆಂಬರ್ 2018, 20:29 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯಾಧುನಿಕ ತನಿಖಾ ವಿಧಾನಗಳನ್ನು ಅನುಸರಿಸಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಡಿಜಿಪಿ ಕಚೇರಿಯಿಂದ ಪೂರ್ಣ ಪ್ರಮಾಣದ ತನಿಖಾ ವೆಚ್ಚ ಮಂಜೂರಾಗದ ಕಾರಣ ತನಿಖೆ ಚುರುಕು ಕಳೆದುಕೊಂಡಿದೆ.

ಎಸ್‌ಐಟಿ ಅಧಿಕಾರಿಗಳು ಕಳುಹಿಸುತ್ತಿರುವ ಬಿಲ್‌ಗಳಿಗೆ, ‘ವಿಶೇಷ ತನಿಖಾ ತಂಡಕ್ಕೆ ನಿರ್ದಿಷ್ಟ ಮೊತ್ತದ ಅನುಮೋದನೆ ಇರುವುದಿಲ್ಲ. ಹಣ ಬಿಡುಗಡೆ ಆಗುವವರೆಗೂ ಕಾಯಬೇಕು’ ಎಂಬ ಉತ್ತರ ಡಿಜಿಪಿ ಕಚೇರಿಯಿಂದ ಬರುತ್ತಿದೆ.

ಇದರಿಂದ, ‘ಕಾರ್ಯಾಚರಣೆ ಸ್ಥಗಿತಗೊಳಿಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡುವ ಕಡೆಗಷ್ಟೇ ಗಮನ ಕೊಡುತ್ತೇವೆ. ಹಣ ಕೊಟ್ಟ ಬಳಿಕ ಕಿಂಗ್‌ಪಿನ್‌ಗಳ ಬೇಟೆ ಮುಂದುವರಿಸಲು ನಿರ್ಧರಿಸಿದ್ದೇವೆ’ ಎಂದು ಹೇಳುವಂತಹ ಪರಿಸ್ಥಿತಿ ಎಸ್‌ಐಟಿಗೆ ಬಂದೊದಗಿದೆ.

ತನಿಖಾ ವೆಚ್ಚದ ಮಾಹಿತಿ ಕೋರಿ ವಕೀಲರಾದ ಸುಧಾ ಕಟ್ವ ಅವರು ಡಿಜಿಪಿ ಕಚೇರಿಗೆ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ‘ಇದುವರೆಗೂ ತನಿಖೆಗೆ ₹ 14.08 ಲಕ್ಷ ಖರ್ಚಾಗಿದ್ದು, ಯಾವುದೇ ಮೊತ್ತ ಬಾಕಿ ಉಳಿಸಿಕೊಂಡಿಲ್ಲ’ ಎಂದು ಡಿಜಿಪಿ ಕಚೇರಿ ಸಿಬ್ಬಂದಿ ಮಾಹಿತಿ ಕೊಟ್ಟಿದ್ದಾರೆ.

ಆದರೆ, ‘ಈವರೆಗೆ ₹ 98 ಲಕ್ಷ ಖರ್ಚಾಗಿದೆ. ಇದಕ್ಕೆ ಸಂಬಂಧಿಸಿದ ಬಿಲ್‌ಗಳನ್ನು ಹಂತ ಹಂತವಾಗಿ ಸಲ್ಲಿಸುತ್ತಲೇ ಬಂದಿದ್ದೇವೆ. ವರ್ಷದ ಹಿಂದೆ ಸಲ್ಲಿಸಿದ್ದ ₹ 14.08 ಲಕ್ಷದ ಬಿಲ್‌ಗಳಿಗೆ ಈಗ ಹಣ ಬಂದಿದೆ’ ಎಂದು ಎಸ್‌ಐಟಿ ಪೊಲೀಸರು ಹೇಳಿದರು.

ಆರಂಭದಲ್ಲೇ ₹ 15 ಲಕ್ಷ: ‘ಆರಂಭದಲ್ಲಿ ನಕ್ಸಲ್ ಆಯಾಮದಡಿ ತನಿಖೆ ನಡೆಸಿ ರಾಜ್ಯದ ಮೂಲೆ ಮೂಲೆಯನ್ನೂ ಸುತ್ತಿದ್ದೆವು. ಮೊದಲ ತಿಂಗಳಲ್ಲೇ ₹15 ಲಕ್ಷದವರೆಗೆ ಖರ್ಚಾಗಿತ್ತು. ಆ ನಂತರ ಎಸ್‌ಐಟಿಯಲ್ಲೇ 8 ಉಪತಂಡ ರಚಿಸಿ ಸುಳಿವಿಗಾಗಿ ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶಗಳಲ್ಲಿ ತಿಂಗಳುಗಟ್ಟಲೆ ಶೋಧ ನಡೆಸಿದ್ದೆವು. ವಾಹನಗಳ ಬಾಡಿಗೆಯಿಂದ, ಆರೋಪಿಗಳನ್ನು ಬಂಧಿಸಿ ಬೆಂಗಳೂರಿಗೆ ಕರೆತರುವವರೆಗೂ ನಾವೇ ಹಣ ವ್ಯಯಿಸಿದ್ದೇವೆ’ ಎಂದು ತಂಡದ ಸಿಬ್ಬಂದಿಯೊಬ್ಬರು ಹೇಳಿದರು.

ಗುಜರಾತ್ ಎಫ್‌ಎಸ್‌ಎಲ್‌ನಲ್ಲಿ ‘ಗೇಟ್ ಪೋಡಿಯಾಟ್ರಿಕ್ ಅನಾಲಿಸಿಸ್’ ಮಾಡಿಸಿದಾಗ ಇನ್‌ಸ್ಪೆಕ್ಟರ್‌ವೊಬ್ಬರು ₹ 3 ಲಕ್ಷ ಕೊಟ್ಟಿದ್ದಾರೆ. ಆ ಮೊತ್ತ ಪಡೆಯಲು ‘ಪೇಯ್ಡ್ ಬೈ ಮೀ’ (ನಾನು ಪಾವತಿಸಿದ್ದೇನೆ) ಎಂದು ಅರ್ಜಿಯಲ್ಲಿ ನಮೂದಿಸಿ ಕಳುಹಿಸಿದ್ದರೆ, ‘ಹಣ ಬರುವವರೆಗೂ ಕಾಯಿರಿ’ ಎಂದು ವಾಪಸ್ ಕಳುಹಿಸಿದ್ದಾರೆ’ ಎಂದರು.

‘ತನಿಖಾ ವೆಚ್ಚವೆಂದು ಸರ್ಕಾರ ಪ್ರತಿವರ್ಷ ₹ 20 ಕೋಟಿ ಬಿಡುಗಡೆ ಮಾಡುತ್ತದೆ. ಅದನ್ನು ಅಳೆದೂ ತೂಗಿ ಹಂಚಬೇಕು. ಸಿವಿಲ್ ಠಾಣೆಗಳು, ಸಂಚಾರ, ಸಿಸಿಬಿ, ಮಾತ್ರ ಈ ಹಣ ಪಡೆಯಬಹುದಾದ ಘಟಕಗಳಾಗಿವೆ. ಎಸ್‌ಐಟಿ ವಿಶೇಷ ತಂಡವಾದ ಕಾರಣ, ಹಲವರ ಅನುಮತಿ ಪಡೆದು ಮಂಜೂರು ಮಾಡುವುದು ವಿಳಂಬವಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅಳೆದೂ ತೂಗಿ ಹಂಚಬೇಕಿದೆ: ‘ತನಿಖಾ ವೆಚ್ಚವೆಂದು ಸರ್ಕಾರ ಪ್ರತಿವರ್ಷ ₹ 20 ಕೋಟಿ ಬಿಡುಗಡೆ ಮಾಡುತ್ತದೆ. ಅದನ್ನು ಅಳೆದೂ ತೂಗಿ ಹಂಚಬೇಕು. ಸಿವಿಲ್ ಠಾಣೆಗಳು, ಸಂಚಾರ, ಸಿಸಿಬಿ, ಅರಣ್ಯ, ಸಿಐಡಿ, ಐಎಸ್‌ಡಿ, ರೈಲ್ವೆ, ಸಿಎಆರ್, ಎಎನ್‌ಎಫ್‌ ಮಾತ್ರ ಈ ಹಣ ಪಡೆಯಬಹುದಾದ ಘಟಕಗಳಾಗಿವೆ. ಎಸ್‌ಐಟಿ ವಿಶೇಷ ತಂಡವಾದ ಕಾರಣ, ಹಲವರ ಅನುಮತಿ ಪಡೆದು ಮಂಜೂರು ಮಾಡುವುದು ವಿಳಂಬವಾಗುತ್ತಿದೆ’ ಎಂದು ಡಿಜಿಪಿ ಕಚೇರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

**

‘ಮೆಡಲ್ ಬೇಡ, ನಮ್ಮ ಹಣ ಕೊಟ್ಟರೆ ಸಾಕು’

‘ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು ಹಗಲು–ರಾತ್ರಿ ಎನ್ನದೇ ಕಂಪ್ಯೂಟರ್ ನೋಡಿ 1.5 ಕೋಟಿಯಷ್ಟು ಮೊಬೈಲ್‌ ಸಂಖ್ಯೆಗಳ ವಿವರ ಪರಿಶೀಲಿಸಿದ್ದಾರೆ. ಇದರಿಂದ ಕಣ್ಣುಗಳಿಗೆ ಹಾನಿಯಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ, ಇನ್‌ಸ್ಪೆಕ್ಟರ್ ಅನಿಲ್ ಕಾರ್ಯಾಚರಣೆಗೆ ತೆರಳುವಾಗ ಬೈಕ್‌ನಿಂದ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಇಷ್ಟೆಲ್ಲ ಶ್ರಮವಹಿಸಿ ಪ್ರಕರಣ ಭೇದಿಸಿದರೂ, ನಮ್ಮವರಿಂದಲೇ ಬೆಂಬಲ ಸಿಗದಿದ್ದರೆ ಹೇಗೆ? ಸರ್ಕಾರ ಎಲ್ಲ ಮುಗಿದ ಮೇಲೆ ಮೆಡಲ್ ಕೊಟ್ಟು ಗೌರವಿಸುವುದಕ್ಕಿಂತ, ನಮ್ಮ ಹಣ ವಾಪಸ್ ಕೊಟ್ಟರೆ ಸಾಕು’ ಎಂದು ಎಸ್‌ಐಟಿ ಪೊಲೀಸರೊಬ್ಬರು ಬೇಸರ ವ್ಯಕ್ತಪಡಿಸಿದರು.

**

ನಿಯಮದ ಪ್ರಕಾರ ಯಾರಿಗೆ ಎಷ್ಟು ತನಿಖಾ ವೆಚ್ಚ (ತಿಂಗಳಿಗೆ)

ಯಾರಿಗೆ

ಎಷ್ಟು

ಗ್ರಾಮಾಂತರ ಠಾಣೆ

₹ 15 ಸಾವಿರ

ಪಟ್ಟಣ ಠಾಣೆ ₹ 20 ಸಾವಿರ
ಎಸ್ಪಿ ಕಚೇರಿ ₹ 25 ಸಾವಿರ
ನಗರ ಠಾಣೆ ₹ 25 ಸಾವಿರ

ಸರ್ಕಲ್ ಇನ್‌ಸ್ಪೆಕ್ಟರ್‌ ಕಚೇರಿ

₹ 20 ಸಾವಿರ

ಡಿವೈಎಸ್ಪಿ/ಎಸಿಪಿ ಕಚೇರಿ ₹ 20 ಸಾವಿರ

ವಿಶೇಷ ತನಿಖಾ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT