ಮೈಸೂರು: ಗ್ರೀನ್ಬಡ್ಸ್ ಆಗ್ರೊ ಫಾರ್ಮ್ ಕಂಪನಿಯಿಂದ ವಂಚನೆಗೆ ಒಳಗಾದವರು, ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರೀನ್ಬಡ್ಸ್ ಕಾರ್ಯಕರ್ತರು ಹಾಗೂ ಠೇವಣಿದಾರರ ರಕ್ಷಣಾ ಸಮಿತಿ ನೇತೃತ್ವದಲ್ಲಿ ಸೇರಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
‘ಐಎಂಎ ವಂಚನೆ ಕುರಿತು ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳುತ್ತಿದೆ. ಇದೇ ರೀತಿ ಗ್ರೀನ್ಬಡ್ಸ್ ಆಗ್ರೊಫಾರ್ಮ್ ಕಂಪನಿ ವಂಚನೆ ಪ್ರಕರಣದಲ್ಲೂ ಕ್ರಮ ಕೈಗೊಳ್ಳಬೇಕು. ವಂಚಿತರಿಗೆ ನ್ಯಾಯ ಕೊಡಿಸಬೇಕು’ ಎಂದು ಹೋರಾಟಗಾರ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.
ಕಂಪನಿಯಿಂದ ಒಟ್ಟು 1.75 ಲಕ್ಷ ಜನರಿಗೆ ವಂಚನೆಯಾಗಿದೆ. ಇವರೆಲ್ಲರೂ ದಾಖಲಾತಿ ಸಲ್ಲಿಸಿದ್ದು, ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಗ್ರೀನ್ಬಡ್ಸ್ ಸಂಸ್ಥೆಯು, 2013ರಲ್ಲಿ ಒಟ್ಟು ₹ 54ಕ್ಕೂ ಅಧಿಕ ಕೋಟಿ ರೂಪಾಯಿಯನ್ನು ತನ್ನ ಗ್ರಾಹಕರಿಗೆ ವಂಚಿಸಿತ್ತು.