ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ 16 ಆರೋಪಿಗಳು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಶುಕ್ರವಾರ ನಡೆಯಿತು.
ನಗರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಆರೋಪಿಗಳ ಪರ ವಕೀಲರ ವಾದ ಆಲಿಸಿದರು. ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಜ. 25ಕ್ಕೆ ಮುಂದೂಡಿದರು.
ಆರೋಪಿಗಳ ಪರ ವಾದಿಸಿದ್ದ ವಕೀಲರಾದ ಕೃಷ್ಣಮೂರ್ತಿ, ಉಮಾಶಂಕರ ಮೇಗುಂಡಿ, ಆರ್.ಬಿ.ದಿವ್ಯಾ ಹಾಗೂ ಹರ್ಷ ಮುತಾಲಿಕ್, ‘ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಎಸ್ಐಟಿ ಪೊಲೀಸರು, ಚಾರ್ಜ್ಶೀಟ್ ಸಲ್ಲಿಸಿದ್ದು ಕ್ರಮಬದ್ಧವಾಗಿಲ್ಲ. ಅವರ ನಡೆಯೇ ಹಲವು ಅನುಮಾನಗಳಿಗೆ ಕಾರಣವಾಗಿದೆ’ ಎಂದು ದೂರಿದ್ದರು.
‘ಪ್ರಕರಣ ಸಂಬಂಧ ಈಗಾಗಲೇ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗಬಂಧನಕ್ಕೆ ನೀಡಲಾಗಿದೆ. ಸೂಕ್ತ ಸಮಯದಲ್ಲಿ ಎಸ್ಐಟಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿಲ್ಲ. ಆರೋಪಿಗಳು ಮತ್ತಷ್ಟುದಿನ ಜೈಲಿನಲ್ಲಿ ಇರಬೇಕು. ಅವರಿಗೆ ಜಾಮೀನು ಸಿಗಬಾರದೆಂಬ ಉದ್ದೇಶದಿಂದ ಪೊಲೀಸರು ಈ ರೀತಿ ಮಾಡಿದ್ದಾರೆ’ ಎಂದು ವಾದಿಸಿದ್ದರು.
‘ಆರೋಪಿಗಳು ತನಿಖೆಗೆ ಸಹಕರಿಸಲು ಸಿದ್ಧರಿದ್ದಾರೆ. ಅವರಿಗೆ ಜಾಮೀನು ಮಂಜೂರು ಮಾಡಬೇಕು’ ಎಂದು ವಕೀಲರು ಕೋರಿದ್ದರು.