ಚಾಮರಾಜನಗರ: ಜಿಲ್ಲೆಯನ್ನು ಡೆಂಗಿ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ಡೆಂಗಿ ಜಾಗೃತಿ ಜಾಥಾವನ್ನು ನಡೆಸಿತು.
ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಕೆ.ಎಂ.ಪ್ರಸಾದ್, ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ಕುಮಾರ್ ಅವರು ಜಾಥಾಕ್ಕೆ ಜಿಲ್ಲಾಡಳಿತ ಮುಂಭಾಗ ಚಾಲನೆ ನೀಡಿದರು.
ಮನೋನಿಧಿ ಕಾಲೇಜು, ಸರ್ಕಾರಿ ನರ್ಸಿಂಗ್ ಕಾಲೇಜು ಸೇರಿದಂತೆ ವಿವಿಧ ಶಾಲಾ, ಕಾಲೇಜಿನ ನೂರಕ್ಕೂ ಅಧಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜಾಥಾದಲ್ಲಿ ಭಾಗವಹಿಸಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಇವರು ಘೋಷಣೆಗಳನ್ನು ಕೂಗುತ್ತಾ, ಅರಿವು ಮೂಡಿಸುವ ಫಲಕಗಳನ್ನು ಹಿಡಿದು ಸಾಗಿದರು.
‘ನಿಂತ ನೀರು ಸೊಳ್ಳೆಗಳ ತವರು’, ‘ಮಲಗುವಾಗ ಸೊಳ್ಳೆ ಪರದೆ ಬಳಸಿ’, ‘ಮನೆಗಳ ಕಿಟಕಿಗಳಿಗೆ ಸೊಳ್ಳೆ ನಿರೋಧಕ ಜಾಲರಿ ಬಳಸಿ’ ಹೀಗೆ ಅನೇಕ ಫಲಕಗಳು ಅವರ ಕೈಯಲ್ಲಿದ್ದವು.
ಜಿಲ್ಲಾಸ್ಪತ್ರೆ ಮುಂಭಾಗವೇ ಸೊಳ್ಳೆಗಳ ತವರು: ನಗರದ ಜಿಲ್ಲಾಸ್ಪತ್ರೆ ಮುಂಭಾಗವೇ ಸೊಳ್ಳೆಗಳ ಆವಾಸಸ್ಥಾನವಾಗಿದ್ದು, ರೋಗ ರುಜಿನಗಳು ಅಲ್ಲಿಂದಲೇ ಹರಡುತ್ತವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಪಟ್ಟಣ ಪೊಲೀಸ್ ಠಾಣೆ ಮುಂಭಾಗದ ಚರಂಡಿಯೂ ಸೊಳ್ಳೆಗಳ ಉತ್ಪಾದನ ಕೇಂದ್ರವಾಗಿದೆ.