‘ನಮ್ಮದು ಜಾತ್ಯತೀತ ಹಿನ್ನೆಲೆಯುಳ್ಳ ಪಕ್ಷ. ಅದಕ್ಕೆ ಅರ್ಥ ಬರಬೇಕಾದರೆ ಸಚಿವ ಸಂಪುಟದಲ್ಲಿ ದಲಿತರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಸ್ಥಾನ ಕಲ್ಪಿಸಬೇಕು. ಆಂಧ್ರಪ್ರದೇಶದಲ್ಲಿ ಅಲ್ಪಸಂಖ್ಯಾತರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಕೇಂದ್ರದಲ್ಲೂ ಮೋದಿ ಅವರೂ ಅಲ್ಪಸಂಖ್ಯಾತರಿಗೆ ಸ್ಥಾನ ನೀಡಿದ್ದಾರೆ. ಆದ್ದರಿಂದ, ನಮ್ಮ ಪಾಲಿನ ಎರಡು ಸ್ಥಾನಗಳನ್ನು ದಲಿತ ಹಾಗೂ ಅಲ್ಪಸಂಖ್ಯಾತರಿಗೆ ನೀಡಬೇಕು. ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಅವರಿಗೆ ಅವಕಾಶ ಸಿಗುವ ವಿಶ್ವಾಸವಿದೆ’ ಎಂದು ಪುನರುಚ್ಚರಿಸಿದರು.