ಮಂಡ್ಯ: ‘ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ ಟಿಕೆಟ್ಗೆ ಒತ್ತಾಯಿಸಿ 200ಕ್ಕೂ ಹೆಚ್ಚು ಮಹಿಳೆಯರು ಏಪ್ರಿಲ್ 1ರಂದು ಬೈಕ್ ರ್ಯಾಲಿ ನಡೆಸಲಿದ್ದಾರೆ. 10ಕ್ಕೂ ಹೆಚ್ಚು ಮಹಿಳೆಯರು ಬುಲೆಟ್ ರ್ಯಾಲಿ ನಡೆಸಿ ಟಿಕೆಟ್ ಒತ್ತಾಯಿಸಲಿದ್ದೇವೆ’ ಎಂದು ಟಿಕೆಟ್ ಆಕಾಂಕ್ಷಿ ಜಿ.ಬಿ.ಪ್ರಭಾ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ‘ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಗೆ ಅವಕಾಶ ನೀಡುವಂತೆ ಹಲವು ದಿನಗಳಿಂದ ಜೆಡಿಎಸ್ ವರಿಷ್ಠರಿಗೆ ಮನವಿ ಮಾಡುತ್ತಿದ್ದೇನೆ. ಆದರೂ ನಮ್ಮ ಬೇಡಿಕೆ ಈಡೇರಿಲ್ಲ. ಹೀಗಾಗಿ ಟಿಕೆಟ್ ನೀಡುವಂತೆ ವರಿಷ್ಠರ ಮೇಲೆ ಒತ್ತಡ ಹೇರಲು ನಗರದ ಕಿರಗಂದೂರು ವೃತ್ತದಿಂದ ಉಮ್ಮಡಹಳ್ಳಿ ಗೇಟ್ವರೆಗೆ ಮಹಿಳೆಯರು ರ್ಯಾಲಿ ನಡೆಸಲಿದ್ದೇವೆ. ನಂತರ ರೈತರ ನಡಿಗೆ ಕುಮಾರಪರ್ವದ ಕಡೆಗೆ ಎಂಬ ಘೋಷಣೆಯೊಂದಿಗೆ ಸುಮಾರು 200 ಮಹಿಳೆಯರು ರ್ಯಾಲಿ ಮಾಡುತ್ತೇವೆ. ಜೆಡಿಎಸ್ ಮುಖಂಡ ಜಫ್ರುಲ್ಲಾಖಾನ್ ಚಾಲನೆ ನೀಡಲಿದ್ದಾರೆ’ ಎಂದರು.
‘ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಸಂಘಟನೆ ಹಾಗೂ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಹಲವು ಚುನಾವಣೆಗಳಲ್ಲಿ ಕೊಡುಗೆ ನೀಡಿದ್ದೇವೆ. ವರಿಷ್ಠರು ಮಂಡ್ಯ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಿ ಜನರ ಸೇವೆ ಮಾಡಲು ಅನುಕೂಲ ಮಾಡಬೇಕು. ಪಕ್ಷದ ಮಹಿಳಾ ಘಟಕದ ಉಪಾಧ್ಯಕ್ಷೆಯಾಗಿ ಹಲವು ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕ್ಷೇತ್ರದಿಂದ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಬೇಕು’ ಎಂದರು.
ಮುಖಂಡರಾದ ಶಕುಂತಲಾ, ಮಂಗಳಾ, ಸರೋಜಮ್ಮ, ಚಿಕ್ಕತಾಯಮ್ಮ, ಸಂಜು ಇದ್ದರು.