ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಎ. ಸುಬ್ಬಣ್ಣ ರೈ ನೇಮಕಗೊಂಡಿದ್ದಾರೆ.
‘ಅಶೋಕಕುಮಾರ ರಂಜೇರೆ ಅವರು ಕುಲಸಚಿವ ಸ್ಥಾನಕ್ಕೆ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಅದನ್ನು ಅಂಗೀಕರಿಸಿ ಶುಕ್ರವಾರದಿಂದಲೇ (ಮೇ 17) ಜಾರಿಗೆ ಬರುವಂತೆ ಸುಬ್ಬಣ್ಣ ರೈ ಅವರನ್ನು ಕುಲಸಚಿವರಾಗಿ ನೇಮಕ ಮಾಡಲಾಗಿದೆ’ ಎಂದು ಕುಲಪತಿ ಪ್ರೊ. ಸ.ಚಿ. ರಮೇಶ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಈ ಕುರಿತು ಅಶೋಕಕುಮಾರ ರಂಜೇರೆ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ನಾನೇನೂ ರಾಜೀನಾಮೆ ನೀಡಿಲ್ಲ. ಕುಲಪತಿಯವರೇ ನನ್ನನ್ನು ಬದಲಿಸಿ ಹೊಸಬರನ್ನು ನೇಮಕ ಮಾಡಿದ್ದಾರೆ. ಒಟ್ಟಾರೆ ವಿ.ವಿ.ಯಲ್ಲಿ ಒಳ್ಳೆಯ ಕೆಲಸಗಳಾದರೆ ಸಾಕು’ ಎಂದು ಪ್ರತಿಕ್ರಿಯಿಸಿದ್ದಾರೆ.