ಶ್ರೀರಂಗಪಟ್ಟಣ: ದುಷ್ಕರ್ಮಿಗಳಿಂದ ಮರ್ಮಾಂಗದ ಇರಿತಕ್ಕೀಡಾದ ವಿದ್ಯಾರ್ಥಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆತ ಅಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಯನ್ನು ಕಾರಿಗೆ ಹತ್ತಿಸಿಕೊಂಡಿದ್ದ ದುಷ್ಕರ್ಮಿಗಳು, ಮಾರ್ಗಮಧ್ಯೆ ಇಳಿಸಿ ಆತನ ಮರ್ಮಾಂಗವನ್ನು ಕತ್ತರಿಸಿದ್ದರು. ತೀವ್ರ ಅಸ್ವಸ್ಥನಾಗಿದ್ದ ಆತನನ್ನು ಕಂಡ ಸಾರ್ವಜನಿಕರು ಪೋಷಕರಿಗೆ ಮಾಹಿತಿ ನೀಡಿ, ಆಸ್ಪತ್ರೆಗೆ ದಾಖಲಿಸಿದ್ದರು.
ಪಾಂಡವಪುರ ತಾಲ್ಲೂಕಿನ ಗ್ರಾಮವೊಂದರ ನಿವಾಸಿಯಾದ ಈತ ಮುಗ್ಧನಾಗಿದ್ದು, ಯಾವ ಕಾರಣಕ್ಕಾಗಿ ಆತನ ಮೇಲೆ ಇಂಥ ಕೃತ್ಯ ನಡೆದಿದೆ ಎಂಬ ಬಗ್ಗೆ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ‘ಪೊಲೀಸರು ತಕ್ಷಣ ಕಾರಣ ಪತ್ತೆ ಮಾಡಬೇಕು. ಸುತ್ತಮುತ್ತಲಿನ ನೂರಾರು ವಿದ್ಯಾರ್ಥಿಗಳು ಕಾಲೇಜಿಗೆ ತೆರಳುತ್ತಾರೆ. ಅವರಿಗೂ ಇಂತಹ ಪರಿಸ್ಥಿತಿ ಬರಬಾರದು’ ಎಂದು ಆಗ್ರಹಿಸಿದ್ದಾರೆ.
‘ದುಷ್ಕರ್ಮಿಗಳು ಯಾರು, ಏಕೆ ಹೀಗೆ ಮಾಡಿದ್ದಾರೆಂದು ಗೊತ್ತಿಲ್ಲ ಎಂದು ವಿದ್ಯಾರ್ಥಿ ತಂದೆಗೆ ತಿಳಿಸಿದ್ದಾನೆ.ಭಾನುವಾರ ಈ ಕುರಿತು ಹೇಳಿಕೆ ಪಡೆಯಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.