ತುಮಕೂರು: ‘ಹಾಸನ ಜಿಲ್ಲೆಯು ಕರ್ನಾಟಕದಲ್ಲಿಯೇ ಇದೆ. ಆ ಜಿಲ್ಲೆಯನ್ನು ಯಾರಿಗೂ ಬರೆದು ಕೊಟ್ಟಿಲ್ಲ. ಆಡಳಿತ ವ್ಯವಸ್ಥೆ ಸರಿಯಾಗಿ ನಡೆಸಲು ನನಗೆ ಆ ಜಿಲ್ಲೆ ಉಸ್ತುವಾರಿ ಕೊಟ್ಟಿದ್ದಾರೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಹಾಸನ ಜಿಲ್ಲೆ ಜೆಡಿಎಸ್ ರಾಜಕಾರಣಿಗಳ ವಿರುದ್ಧ ಮೊದಲಿನಿಂದಲೂ ಮತ್ತು ಈಚೆಗೆ ಲೋಕ ಸಭಾ ಚುನಾವಣೆಯಲ್ಲಿ ವಾಗ್ದಾಳಿ ನಡೆಸಿಕೊಂಡು ಬಂದಿದ್ದೀರಿ. ಈಗ ಆ ಜಿಲ್ಲೆ ಉಸ್ತುವಾರಿ ನಿಮಗೆ ವಹಿಸಿಕೊಡಲಾಗಿದೆ. ಹೇಗೆ ಆಡಳಿತ ನಡೆಸುತ್ತೀರಿ ಎಂಬ ಪ್ರಶ್ನಿಸಿದಾಗ ಮಾಧುಸ್ವಾಮಿ ಪ್ರತಿಕ್ರಿಯಿಸಿದರು.
‘ಅಲ್ಲಿನ ಜಿಲ್ಲಾ ಆಡಳಿತ ವ್ಯವಸ್ಥೆಯು ಹಳಿಯ ಮೇಲೆ ಸರಿಯಾಗಿ ಸಾಗಲಿ. ಅಧಿಕಾರಿಗಳು ಕಾನೂನುಬದ್ಧವಾಗಿ ಕೆಲಸ ಮಾಡಬೇಕು. ನಿಯಮಬಾಹಿರವಾಗಿ ಕೆಲಸ ಮಾಡಬಾರದು ಎಂಬುದು ನನ್ನ ನಿರೀಕ್ಷೆ. ಆ ನಿರೀಕ್ಷೆಗೆ ತಕ್ಕಂತೆ ಅವರು ಕೆಲಸ ಮಾಡುವ ಭರವಸೆ ಇದೆ’ ಎಂದರು.