ಹುಬ್ಬಳ್ಳಿ: ‘ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಕೇಂದ್ರ ಸರ್ಕಾರವು ಆರ್ಬಿಐ ಅಸ್ಥಿರಗೊಳಿಸಿ, ಅದರ ಸ್ವಾಯತ್ತತೆಗೆ ಪೆಟ್ಟು ಕೊಟ್ಟಿದೆ’ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವ ಮೂಲಕ ಆರ್ಬಿಐ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸದಂತೆ ಮಾಡಿದೆ’ ಎಂದು ಹೇಳಿದರು.
‘ರಘುರಾಂರಾಜನ್ ಗವರ್ನರ್ ಆಗಿದ್ದಾಗ ಆರ್ಬಿಐ ಕಾರ್ಯನಿರ್ವಹಣೆಯಲ್ಲಿ ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಸಹಮತ ನೀಡದ ಕಾರಣಕ್ಕೆ ಅವರನ್ನು ತೆಗೆದುಹಾಕಿದರು. ಅವರೇ ನೇಮಕ ಮಾಡಿದ್ದ ಹಣಕಾಸು ಸಲಹೆಗಾರರೂ ರಾಜೀನಾಮೆ ಕೊಟ್ಟು ಹೊರಹೋದರು. ಕೇಂದ್ರ ಸರ್ಕಾರದ ನೀತಿಯಿಂದ ಆರ್ಬಿಐನ ಕಾರ್ಯನಿರ್ವಹಣೆ ಸಡಿಲವಾಗಿದೆ. ಇದರಿಂದ ದೇಶದ ಅರ್ಥವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ’ ಎಂದು ಅವರು ಅಭಿಪ್ರಾಯಪಟ್ಟರು.