ಬೆಂಗಳೂರು: ಜನಾರ್ದನ ರೆಡ್ಡಿಗೆ ಉತ್ತರ ಕೊಡುತ್ತಾ ನಿಂತರೆ ಮುಖ್ಯಮಂತ್ರಿ ಸ್ಥಾನಕ್ಕೇ ಅಪಮಾನ ಆಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕಾರಣಕ್ಕಾಗಿಯೇ ರೆಡ್ಡಿ ಬಗ್ಗೆ ಮಾತನಾಡಲು ಹೋಗುವುದಿಲ್ಲ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಶುಕ್ರವಾರ ತಿಳಿಸಿದರು.
‘ಸಿಸಿಬಿ ದುರುಪಯೋಗ ಮಾಡುತ್ತಿದ್ದೇನೆ ಎಂಬ ಅವರ ಆರೋಪ ಶುದ್ಧ ಸುಳ್ಳು. ಅವರ ಮೇಲೆ ದ್ವೇಷ ರಾಜಕಾರಣ ಮಾಡುವುದಿದ್ದರೆ 2006 ರಲ್ಲೇ ಮಾಡುತ್ತಿದೆ. ನಾನು ಯಾವತ್ತೂ ದ್ವೇಷದ ರಾಜಕಾರಣ ಮಾಡಿದವನಲ್ಲ, ಮಾಡುವುದೂ ಇಲ್ಲ’ ಎಂದು ಪುನರುಚ್ಚರಿಸಿದರು.
‘ಅದೇನೊ ಪುಣ್ಯಕೋಟಿ ಕಥೆ ಹೇಳಿದ್ದಾರೆ. ಸಾವಿರಾರು ಪೊಲೀಸರನ್ನು ಅವರ ಹಿಂದೆ ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ. ಅದರ ಬಗ್ಗೆ ನನಗೇನೂ ಗೊತ್ತಿಲ್ಲ’ ಎಂದರು.
ನೈಸ್ ಹೊಂದಾಣಿಕೆ ಇಲ್ಲ: ‘ನೈಸ್ ಕಂಪನಿ ಜತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಅಡ್ಜೆಸ್ಟ್ಮೆಂಟ್ ರಾಜಕಾರಣವನ್ನು ರಾಜ್ಯಕ್ಕೆ ಪರಿಚಯಿಸಿದವರೇ ಬಿಜೆಪಿಯವರು. 2006 ರಲ್ಲಿ ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗಿದ್ದಾಗಲೇ ನೈಸ್ ಬಗೆಗಿನ ಅವರ ಬದ್ಧತೆ ಏನು ಎಂಬುದನ್ನು ತೋರಿಸಿದ್ದಾರೆ’ ಎಂದರು.
‘ನಾವು ಯಾವುದೇ ಬಗೆಯ ಕಾನೂನು ಬಾಹಿರ ಚಟುವಟಿಕೆಗಳಿಗೂ ಅವಕಾಶ ನೀಡುವುದಿಲ್ಲ. ನೈಸ್ ವರದಿ ಇನ್ನೂ ಸದನದಲ್ಲಿ ಅಂಗೀಕಾರ ಆಗಿಲ್ಲ. ಅಂಗೀಕಾರ ಆದ ಬಳಿಕ ಸಮಯಕ್ಕೆ ತಕ್ಕ ಹಾಗೆ ತೀರ್ಮಾನ ಮಾಡುತ್ತೇವೆ. ಸರ್ಕಾರ ಬಂದು ಐದು ತಿಂಗಳಾಗಿದೆ. ನನಗೂ ಸ್ವಲ್ಪ ಸಮಯ ಕೊಡಿ’ ಎಂದರು.