ಮೈಸೂರು: ‘ಪಕ್ಷ ತೊರೆದು ಹೋಗಿ ಮಂತ್ರಿಗಳಾಗಿರುವ 10 ಮಂದಿ ಮಜಾ ಮಾಡಿದರೆ, ಬಿಜೆಪಿಯ ಮೂಲ ಶಾಸಕರು ಕಡುಬು ತಿನ್ನುತ್ತಾ ಕೂರುತ್ತಾರೆಯೇ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಗುರುವಾರ ಇಲ್ಲಿ ಪ್ರಶ್ನಿಸಿದರು.
‘ಸಚಿವ ಸ್ಥಾನ ಸಿಗದವರು ಮುಂದೆ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಿ. ಅವರು ಕೂಡ ಯೋಚನೆ ಮಾಡುವ ಶಕ್ತಿ ಹೊಂದಿದ್ದಾರೆ’ ಎಂದರು.
‘ಬಿಜೆಪಿ ಸರ್ಕಾರದಲ್ಲಿ ಬೆಳಿಗ್ಗೆಯೊಂದು, ಮಧ್ಯಾಹ್ನಕ್ಕೊಂದು ತೀರ್ಮಾನಗಳಾಗುತ್ತಿವೆ. ಸರ್ಕಾರ ಉಳಿಸಿಕೊಳ್ಳುವಲ್ಲಿ ಮತ್ತು ಪತನಗೊಳಿಸುವ ವಿಚಾರದಲ್ಲಿ ಯಡಿಯೂರಪ್ಪ ಪರಿಣತರಾಗಿದ್ದಾರೆ, ಅಪಾರ ಅನುಭವ ಹೊಂದಿದ್ದು, ಕರಗತ ಮಾಡಿಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ಮಂಡ್ಯದಲ್ಲಿ ನಮಗೆ ಏನೂ ಮಾಡಲು ಆಗಿಲ್ಲ. ಇನ್ನು ನಾರಾಯಣಗೌಡ ಏನು ಅಭಿವೃದ್ಧಿ ಮಾಡಿ ತೋರಿಸುತ್ತಾರೆ ನೋಡೋಣ’ ಎಂದು ಹೇಳಿದರು.
‘ನಮ್ಮ ಪಕ್ಷದಲ್ಲಿದ್ದಾಗ ಕೆಲವರಿಗೆ ತೃಪ್ತಿ ಆಗಿರಲಿಲ್ಲ. ಬಿಜೆಪಿ ಸೇರಿರುವ ಅವರೀಗ ಸಂಪೂರ್ಣ ತೃಪ್ತರಾಗಿದ್ದಾರೆ, ಸಂಪತ್ಭರಿತರಾಗಿದ್ದಾರೆ’ ಎಂದು ಕಾಲೆಳೆದರು.