ಧಾರವಾಡ: ‘ಲಿಂಗಾಯತ ಧರ್ಮ ಸಮ್ಮೇಳನವನ್ನು ಇನ್ನೆರಡು ತಿಂಗಳಲ್ಲಿ ದೆಹಲಿಯಲ್ಲಿ ಆಯೋಜಿಸಲು ಸಿದ್ಧತೆ ನಡೆದಿದೆ’ ಎಂದು ಬಸವ ಧರ್ಮ ಪೀಠಾಧ್ಯಕ್ಷೆ ಡಾ.ಮಾತೆ ಮಹಾದೇವಿ ಹೇಳಿದರು.
ಇಲ್ಲಿನ ಜಗನ್ಮಾತಾ ಅಕ್ಕಮಹಾದೇವಿ ಮಠದಲ್ಲಿ ಶರಣೋತ್ಸವ ಕಾರ್ಯಕ್ರಮ ನಿಮಿತ್ತ ಜರುಗಿದ ಅಕ್ಕಮಹಾದೇವಿ ಪೀಠದ 48ನೇ ವಾರ್ಷಿಕೋತ್ಸವ ಹಾಗೂ ಪೀಠಾರೋಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಮಹಾರಾಷ್ಟ್ರ, ಆಂಧ್ರ ಪ್ರದೇಶ, ಗೋವಾ, ಕೇರಳ ಹಾಗೂ ಕರ್ನಾಟಕ ಪ್ರದೇಶದಿಂದ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಲಿಂಗಾಯತ ಸ್ವತಂತ್ರ ಧರ್ಮವಿದ್ದು, ಸಾಂವಿಧಾನಿಕ ಮಾನ್ಯತೆ ನೀಡುವಂತೆ ಒತ್ತಾಯಿಸಲಾಗುವುದು’ ಎಂದರು.
‘ಧರ್ಮೋದ್ಧಾರಕ್ಕಾಗಿ ಸ್ಥಾಪಿತಗೊಂಡ ಪೀಠಗಳಲ್ಲಿ ಕೆಲವು ವಿದ್ಯಾಪೀಠಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಧರ್ಮ ಪ್ರಸಾರ, ವಚನ ಸಾಹಿತ್ಯ ಪ್ರಚಾರ, ಜ್ಞಾನ, ದಾಸೋಹದ ಪೀಠಗಳಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಮೂಢನಂಬಿಕೆ, ಕಂದಾಚಾರದ ಮಧ್ಯೆ ಸಿಲುಕಿಸಿ ಜನರನ್ನು ಅಂಧಕಾರದಲ್ಲಿ ಕೆಡವುವುತ್ತಿರುವ ಕೆಲವು ವೈದಿಕ ಸಂಪ್ರದಾಯದವರು, ಸಮಾಜದ ದಿಕ್ಕು ತಪ್ಪಿಸುತ್ತಿದ್ದಾರೆ. ಗುರು, ಲಿಂಗ, ಜಂಗಮ ತತ್ವಗಳನ್ನು ತಿಳಿಸಿಕೊಡಬೇಕಾದ ಪೀಠಾಧಿಪತಿಗಳು ಜನರಲ್ಲಿ ಜಾಗೃತಿ ಮೂಡಿಸಿದಲ್ಲಿ ಮಾತ್ರ ಜನರು ಸನ್ಮಾರ್ಗದತ್ತ ಸಾಗಲು ಸಾಧ್ಯ’ ಎಂದರು.
‘ಅಂಧ ಶ್ರದ್ಧೆಯ ಅಂಶಗಳನ್ನು ಮನಗಂಡ ವಿಶ್ವಗುರು ಬಸವಣ್ಣ, ಅವುಗಳ ವಿರುದ್ಧ ಹೋರಾಟ ಮಾಡಿದರು. ಮನ ಹಾಗೂ ಮನೆಯನ್ನು ಮಹಾಮನೆಯನ್ನಾಗಿ ಪರಿವರ್ತಿಸುವ ಕೆಲಸ ಮಾಡಿದರು. ಬಸವಣ್ಣನವರ ಹಾಗೆ ನಾವೂ ಸಮಾಜದ ಉದ್ಧಾರಕ್ಕೆ ಶ್ರಮಿಸಬೇಕು’ ಎಂದು ಮಾತೆ ಮಹಾದೇವಿ ಹೇಳಿದರು.
ಅಕ್ಕಮಹಾದೇವಿ ಅನುಭಾವ ಪೀಠದ ಪೀಠಾಧ್ಯಕ್ಷ ಮಾತೆ ಜ್ಞಾನೇಶ್ವರಿ, ಗಂಗಾ ಮಾತಾಜಿ, ಮಾತೆ ಸತ್ಯಾದೇವಿ, ಪ್ರಭುಲಿಂಗ ಸ್ವಾಮೀಜಿ, ಬಸವ ಪ್ರಕಾಶ ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ, ಬಿ.ಜಿ. ಹೊಸಗೌಡ್ರ, ಧನರಾಜ ಜೀರಗಿ, ಅಶೋಕ ಶೀಲವಂತ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.